25/09/2016
ಆಧುನಿಕ ಭಾರತದ ನಿರ್ಮಾಪಕರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರ ಪ್ರಜ್ವಲ, ಪ್ರಗತಿಪರ ಅಭಿಯಾನದ ಸ್ಪರ್ಶಕ್ಕೆ ಒಳಗಾಗದ ಯಾವ ಸಾರ್ವಜನಿಕ ಜೀವನಕ್ಷೇತ್ರವೂ ಇಲ್ಲ. ಕೈಗಾರಿಕೆಗಳಿಂದ ಹಿಡಿದು ಶಿಕ್ಷಣದವರೆಗೆ, ಆಡಳಿತದಿಂದ ಹಿಡಿದು ಸಾಹಿತ್ಯದವರೆಗೆ ಎಲ್ಲ ಕ್ಷೇತ್ರಗಳನ್ನೂ ಅವರು ಉದ್ದೀಪ್ತಗೊಳಿಸಿದರು. ಈ ನೂರಾರು ಪ್ರಗತಿಕಾರ್ಯಗಳನ್ನು ವಿಶ್ವೇಶ್ವರಯ್ಯನವರು ಒಟ್ಟೊಟ್ಟಿಗೆ ಉನ್ಮುಖಗೊಳಿಸಿದರು ಎಂಬುದು ನಿಜಕ್ಕೂ ಅನ್ಯಾದೃಶವಾದ ಸಾಧನೆ. ಒಂದು ದೇಶಕ್ಕೆ ಕೇವಲ ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಅನುಕೂಲಗಳು ಆಗಿರುವುದು ಬಹುಷಃ ಜಗತ್ತಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಸಂಗತಿ ಎಂದು ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ನಗರ ಸಂಚಾಲಕ ಶ್ರೀ ಬಿ.ವಿ ತ್ಯಾಗರಾಜುರವರು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಕೃಪಾಮಯಿ ಮಕ್ಕಳ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ 'ಸರ್ ಎಂ. ವಿಶ್ವೇಶ್ವರಯ್ಯ'ನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸುಸಂಸ್ಕೃತ ಕುಟುಂಬವೊಂದರಲ್ಲಿ 1860ರಲ್ಲಿ ಜನಿಸಿ, ಕಡುಬಡತನದ ನಡುವೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ 1884ರಲ್ಲಿ ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮುಂಬೈ ಸರ್ಕಾರದ 24 ವರ್ಷಗಳ ತಮ್ಮ ಸೇವೆಯಲ್ಲಿ ನೀರನ್ನು ಪೋಲುಮಾಡದೆ ಬಳಸುವ ವ್ಯವಸಾಯಕ್ರಮ - 'ಬ್ಲಾಕ್ ಸಿಸ್ಟಮ್', 'ಆಟೋಮ್ಯಾಟಿಕ್ ಸ್ಲೂಸ್ ಗೇಟ್ಸ್' ನಿರ್ಮಾಣ, ಎಡೆನ್ ಪಟ್ಟಣದ ಜಲನಿರ್ಗಮನ ಯೋಜನೆ - ಹೀಗೆ ಅನೇಕ ಯೋಜನೆಗಳನ್ನು ರೂಪಿಸಿ ತಮ್ಮ ಕಾರ್ಯಕ್ಷಮತೆಯಿಂದ ವೃತ್ತಿಯಲ್ಲಿ ಸುಮಾರು 18 ದರ್ಜೆಗಳು ಮೇಲೇರಿದರು. ವಿಶ್ವೇಶ್ವರಯ್ಯನವರು ಹೈದರಾಬಾದ್ ನಗರವನ್ನು ಪ್ರವಾಹದಿಂದ ರಕ್ಷಿಸಲು ರೂಪಿಸಿದ ಯೋಜನೆಯ ಸಫಲತೆಯನ್ನು ಕಂಡು ಹೈದರಾಬಾದ್ ನಿಜಾಮ ನವಾಬ್ ಜಂಗ್ ಬಹಾದ್ದೂರ್ ಅವರನ್ನು 'ಆಧುನಿಕ ಹೈದರಾಬಾದ್ ನಿರ್ಮಾಪಕ' ಎಂದು ಕರೆದ.
1909ರಲ್ಲಿ ವಿಶ್ವೇಶ್ವರಯ್ಯನವರು ಮೈಸೂರಿನ ಮುಖ್ಯ ಇಂಜಿನಿಯರ್ ಆಗಿ ನಂತರ 1912ರಲ್ಲಿ ಮೈಸೂರಿನ ದಿವಾನರಾಗಿಯೂ ನೇಮಕಗೊಂಡರು. ಈ ಕಾಲಾವಧಿಯಲ್ಲಿ ಮೈಸೂರು ರಾಜ್ಯದ ಔದ್ಯಮಿಕ, ಶೈಕ್ಷಣಿಕ ಮತ್ತು ಸಾರ್ವತ್ರಿಕ ಪ್ರಗತಿಗೆ ಅವರು ಹಾಕಿದ ಅಸ್ತಿಭಾರ ನಮ್ಮ ರಾಜ್ಯದ ಆಧುನಿಕ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು. ಸರ್ಕಾರಿ ಕೆಲಸಗಳಲ್ಲಿ ಐರೋಪ್ಯ ಜನರ ದಕ್ಷತೆಯನ್ನು ತರಲು ಪ್ರಯತ್ನಿಸಿದರು. 'ಮೈಸೂರು ಸಂಪದಭಿವೃದ್ಧಿ ಸಮಾವೇಶ', ಬಾಲ್ಯವಿವಾಹದ ಹಾನಿಯ ಬಗ್ಗೆ ತಿಳುವಳಿಕೆ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಹೋಟೆಲ್ ಉದ್ಯಮಕ್ಕೆ ಉತ್ತೇಜನ, ಗ್ರಾಮಗಳ ಪುನರುಜ್ಜೀವನಕ್ಕೆ ಯೋಜನೆಗಳು, ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ - ಪಂಗಡಗಳ ಮಕ್ಕಳಿಗೆ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ರೇಷ್ಮೆ, ಸೋಪ್, ಗಂಧದ ಎಣ್ಣೆ, ಲೋಹ, ಚರ್ಮದ ಹದ ಮಾಡುವ ಕಾರ್ಖಾನೆಗಳ ಸ್ಥಾಪನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಆರಂಭ, ಕನ್ನಂಬಾಡಿ ಕಟ್ಟೆ, ಛೇಂಬರ್ ಆಫ್ ಕಾಮರ್ಸ್, ಕೆ.ಆರ್ ಕಾಟನ್ ಮಿಲ್ಸ್ - ಹೀಗೆ ನೂರಾರು ಸಮಾಜಮುಖಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದರು.
ತಾವು ನಿವೃತ್ತರಾದಮೇಲೂ ಸುಮಾರು 30 ವರ್ಷಗಳ ಕಾಲ ಸಲಹಾಗಾರರಾಗಿ ಅಷ್ಟೇ ಕ್ರಿಯಾಶೀಲವಾಗಿ ಕೆಲಸಮಾಡಿದರು. ತಮ್ಮ ಸುಮಾರು 102 ವರ್ಷಗಳ ಸುದೀರ್ಘ ಜೀವನದಲ್ಲಿ ಯಾರನ್ನೂ ನೋಯಿಸಿದವರಲ್ಲ. ಮಿತ ಭಾಷಿಯಾಗಿ ಒಂದು ಮೌನಕ್ರಾಂತಿಯನ್ನೇ ಮಾಡಿದರು. ಅವರ ನಿಷ್ಕಳಂಕ ಜೀವನ, ಉದಾರ ಮನಸ್ಸು, ಕಾರ್ಯನಿರ್ವಾಹಕ ಶಕ್ತಿ, ಬುದ್ಧಿ ಚಾತುರ್ಯ, ಸಂಯಮ, ಶಿಸ್ತು, ನಿಸ್ವಾರ್ಥ ಜನಪ್ರೀತಿ ನಮಗೆ ಮಾದರಿ ಎಂದು ಬಿ. ವಿ ತ್ಯಾಗರಾಜುರವರು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಬಳಗದ ಚಿ. ಸಂಜನ್ ವಿಶ್ವೇಶ್ವರಯ್ಯನವರನ್ನು ಕುರಿತಾದ ಒಂದು ಹಾಡನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದನು. ಕಾರ್ಯಕ್ರಮವನ್ನು ಚಿ. ಸುನೀಲ್ ನಿರೂಪಿಸಿದರು. ಬಳಗದ ಮಾರ್ಗದರ್ಶಕ ಶ್ರೀ ರಂಗನಾಥ್ ಹಾಗು ಶ್ರೀಮತಿ ಸುನಂದಾ ಮತ್ತು ಶ್ರೀಮತಿ ಲಕ್ಷೀ ತ್ಯಾಗರಾಜುರವರು ಉಪಸ್ಥಿತರಿದ್ದರು.