23/02/2026
ಕೃಪೆ: ವಿಜಯ ಮುಗಿಲು ವಿಶೇಷ
ಲೇಖಕರು: ನವೀನ್ ಕಿಲಾರ್ಲಹಳ್ಳಿ
💥ಕಾಡ್ಗಿಚ್ಚಿನ ಕಾಟ… ಅರಣ್ಯ ಇಲಾಖೆ ಸಿದ್ದವೇ..? 💥
ಬೇಸಿಗೆ ಮುನ್ನವೇ ಹೆಚ್ಚಿದ ಆತಂಕ
ಪಾವಗಡ ಅರಣ್ಯ ಇಲಾಖೆಗೆ ಸವಾಲು..!
ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮ ಅಗತ್ಯ
ಪ್ರಕೃತಿಗೆ ಬೆಂಕಿ ಹಚ್ಚಬೇಡಿ..!
ಪಾವಗಡ: ಬೇಸಿಗೆ ಕಾಲ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ ಬಿಸಿಲಿನ ತಾಪ ಈಗಲೇ ಜೋರಾಗಿದೆ. ಈ ವೇಳೆ ಮೂಕ ಜೀವಿಗಳ ಮೇವಿನ ಆಹಾಕಾರ, ಕಾಡು ಮೃಗಗಳ ಹಸಿವಿನ ಹೋರಾಟ, ನಡುವೆ ಅರಣ್ಯ ಪ್ರದೇಶಗಳಲ್ಲಿ ಒಣಗಿದ ಎಲೆಗಳು ನೆಲವನ್ನು ಆವರಿಸಿವೆ. ಬೆಟ್ಟ ಗುಡ್ಡಗಳಲ್ಲಿ ಒಣಗಿದ ಹುಲ್ಲು ಒಂದು ಸಣ್ಣ ಬೆಂಕಿ ಕಿಡಿಯೇ ಸಾಕು — ಬೆಳೆದು ನಿಂತಿರುವ ಅರಣ್ಯ ಸಂಪತ್ತು ಕ್ಷಣಾರ್ಧದಲ್ಲಿ ಭಸ್ಮವಾಗಲು. ನಿರ್ಲಕ್ಷ ಮಾಡಿದ್ರೆ, ತಮಾಷೆಗೋ ಇಲ್ಲ ಅರಣ್ಯ ಇಲಾಖೆಯ ಮೇಲಿನ ಕೋಪಕ್ಕೋ ಬೆಂಕಿ ಹಾಕಿದ್ರೆ ಅಪಾಯ ಎದುರಾಗಬಹುದು.
ಈ ಹಿನ್ನೆಲೆಯಲ್ಲಿ ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ.
ತಾಲ್ಲೂಕಿನ ವದನಕಲ್, ಕಾಮನದುರ್ಗ, ನಿಡಗಲ್, ಯರ್ರಮ್ಮನಹಳ್ಳಿ,ಕೋಟಗುಡ್ಡ, ಸಾಸಲುಕುಂಟೆ ಸೇರಿದಂತೆ ಹಲವೆಡೆ ಅರಣ್ಯದ ಅಂಚಿನಲ್ಲಿ ಒಣಗಿದ ಹುಲ್ಲು ಮತ್ತು ಗಿಡಗಂಟಿಗಳು ಹೆಚ್ಚಾಗಿ ಕಂಡು ಬರುತ್ತಿವೆ. ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕಾಳ್ಗಿಚ್ಚಿನ ಘಟನೆಗಳು ಸಂಭವಿಸುತ್ತಿರುವ ಹಿನ್ನೆಲೆ ಮೂಕಜೀವಿಗಳ ಆರ್ತನಾದ ಗೋಳಿನ ಕೇಳಿ ಕಂಡಿದ್ದೀವೆ. ಈ ಬಾರಿ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಫೈರ್ಲೈನ್ ನಿರ್ಮಾಣ, ನೀರಿನ ಕೊಳಗಳ ಸಿದ್ಧತೆ, ಗಸ್ತು ವ್ಯವಸ್ಥೆ ಹಾಗೂ ವಾಚರ್ಗಳ ಕಟ್ಟೆಚ್ಚರ ಕ್ರಮಗಳು ಕೈಗೊಳ್ಳಬೇಕಿದೆ.
🚶ವಾಚ್ ಟವರ್ ವ್ಯವಸ್ಥೆ🧑🦯🚶
ಕೋಟಗುಡ್ಡ ಹಾಗೂ ಯರ್ರಮ್ಮನಹಳ್ಳಿ ಅರಣ್ಯ ಭಾಗಗಳಲ್ಲಿ ಶಾಶ್ವತ ವಾಚ್ ಟವರ್ಗಳಿವೆ. ತಾತ್ಕಾಲಿಕವಾಗಿ ಕಾಮನದುರ್ಗ, ಬಿ.ಕೆ.ಹಳ್ಳಿ, ವದನಕಲ್, ನಿಡಗಲ್ ಮತ್ತು ಕೋಟಗುಡ್ಡ ಭಾಗಗಳಲ್ಲಿ ವಾಚ್ ಟವರ್ ನಿರ್ಮಿಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ರಾಕೇಶ್ ಟಿ.ಎಂ ತಿಳಿಸಿದ್ದಾರೆ.
ಪ್ರತಿ ವಾಚ್ ಟವರ್ಗೆ ಒಬ್ಬರಂತೆ ಕಾವಲುಗಾರರನ್ನು ನಿಯೋಜಿಸಲಾಗಿದ್ದು, ಅರಣ್ಯ ಪ್ರದೇಶದಲ್ಲಿ ಹೊಗೆ ಅಥವಾ ಬೆಂಕಿ ಕಾಣಿಸಿದ ಕೂಡಲೇ ಮಾಹಿತಿ ನೀಡುವ ಜವಾಬ್ದಾರಿ ಇವರದಾಗಿದೆ. ಬೆಂಕಿ ನಂದಿಸಲು ಮೂರು ತಿಂಗಳ ಅವಧಿಗೆ ತಾತ್ಕಾಲಿಕ 05 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೀರಿನ ಅಭಾವ – ವನ್ಯಜೀವಿಗಳ ಸಂಕಷ್ಟ.
ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾಗುವುದರಿಂದ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಕಾಳ್ಗಿಚ್ಚು ಸಂಭವಿಸಿದರೆ ಮರಗಳಷ್ಟೇ ಅಲ್ಲ, ಅನೇಕ ಪ್ರಾಣಿಗಳ ಜೀವಕ್ಕೂ ಅಪಾಯ ಉಂಟಾಗುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದರೆ ವರ್ಷಗಳ ಕಾಲ ಬೆಳೆದ ಹಸಿರು ಸಂಪತ್ತು ಕ್ಷಣಾರ್ಧದಲ್ಲಿ ನಾಶವಾಗುತ್ತದೆ.
ಅರಣ್ಯವು ಪರಿಸರ ಸಮತೋಲನದ ಜೀವನಾಡಿ. ಮಳೆ, ಗಾಳಿ ಮತ್ತು ಜೀವಜಗತ್ತಿನ ಅಸ್ತಿತ್ವ ಅರಣ್ಯದ ಮೇಲೆ ಅವಲಂಬಿತವಾಗಿದೆ. ಇಂತಹ ಅಮೂಲ್ಯ ಸಂಪತ್ತನ್ನು ರಕ್ಷಿಸುವುದು ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ.
☘