05/01/2022
ಸಾವಿರಾರು ಅನಾಥ ಮಕ್ಕಳ ತಾಯಿ ಎಂದೇ ಖ್ಯಾತರಾಗಿರುವ #ಸಿಂಧೂತಾಯಿ_ಸಪ್ಕಾಲ್ ಅವರು ನೆನ್ನೆ ಇಹಲೋಕದ. ಯಾತ್ರೆ ಮುಗಿಸಿದ್ದಾರೆ.
ಅವರಿಗೆ ಸದ್ಗತಿ ಕೋರುತ್ತಾ ಅವರ ಬಗ್ಗೆ ಹಿಂದೆ ಬರೆದಿದ್ದ ಲೇಖನವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
#ಆಯಿ
ನಿಮಗೆಲ್ಲ Mother Teresa ಬಗ್ಗೆ ಗೊತ್ತಿದೆ...... ಕಾರಣ Mother Teresa ಬಗ್ಗೆ ನಮ್ಮ ಶಾಲಾ ಪಠ್ಯ ಪುಸ್ತಕಗಳು ಮಾತಾಡುತ್ತವೆ, ನನಗೆ ಶಾಲಾ ಪಠ್ಯ ಪುಸ್ತಕಗಳು Mother Teresa ಬಗ್ಗೆ ಮಾತಾಡೋದಕ್ಕೆ ವಿರೋಧವಿಲ್ಲ.......
ಆದರೆ Teresa ಗೆ ಕೊಟ್ಟ ಪ್ರಚಾರದಲ್ಲಿ 10% ಪ್ರಚಾರವನ್ನೂ ಏಕೆ ಇಂತಹ ತೆರೆ-ಮರೆಯ ಸಾಧಕರಿಗೆ ಕೊಡಲಿಲ್ಲ ಎಂಬುದಕ್ಕಷ್ಟೇ ನನ್ನ ವಿರೋಧ.
ಈಗ ವಿಷಯಕ್ಕೆ ಬರೋಣ.....
ನಾವು ನೀವೆಲ್ಲ ಸಾಮಾನ್ಯವಾಗಿ ಭಿಕ್ಷುಕರನ್ನು ಕಂಡರೆ ಒಂದಷ್ಟು ಹಣವನ್ನೋ, ಅಥವಾ ಒಂದು ಹೊತ್ತಿನ ಊಟವನ್ನೋ ಕೊಟ್ಟು ಆ ಭಿಕ್ಷುಕರನ್ನು ಅಲ್ಲಿಗೇ ಮರೆತುಬಿಡುತ್ತೇವೆ, ನಾವ್ಯಾರೂ ಆ ಭಿಕ್ಚುಕರ ಮುಂದಿನ ಜೀವನದ ಬಗ್ಗೆ ಯೋಚಿಸುವುದೇ ಇಲ್ಲ.
ಆದರೆ ನಾನಿಂದು ನಿಮಗೆ ಒಂದು ಅಸಾಧಾರಣ ನಾರೀಶಕ್ತಿಯನ್ನು ಪರಿಚಯಿಸುತ್ತಿದ್ದೇನೆ, ನಮಗೆ ಕೇವಲ ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಹೇಗೆ ಸಹಾಯ ಮಾಡುವ ದಾರಿ ಕೂಡ ತಾನೇ ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ಇವರು ಸಾಕ್ಷಿ.....
ಅಂದಹಾಗೆ ಇವರು 1500 ಹೆಚ್ಚು ಮಕ್ಕಳ ಆಯಿ (ಮಾಯಿ) ಅಥವಾ ತಾಯಿ ಇವರ ಹೆಸರು #ಸಿಂಧೂತಾಯಿ
ನವೆಂಬರ್ 18 1948 ರಲ್ಲಿ ಮಹಾರಾಷ್ಟ್ರದ ವಾರ್ಧಾ ಜೆಲ್ಲೆಯ ಪಿಂಪ್ರಿ ಮೇಘೇ ಎಂಬ ಪುಟ್ಟ ಹಳ್ಳಿಯಲ್ಲಿ ಇವರ ಜನನವಾಗುತ್ತದೆ, ಮನೆಯಲ್ಲಿ ಕಿತ್ತು ತಿನ್ನುವ ಕಡು ಬಡತನ.... ಆ ಬಡತನದಲ್ಲಿ ಯಾರಿಗೂ ಬೇಡವಾದ ಮಗುವಾಗಿ ಇವರು ಹುಟ್ಟಿದ್ದರಿಂದ ಮನೆಯಲ್ಲಿ ಎಲ್ಲರೂ ಆ ಮಗುವನ್ನು ಚಿಂದಿ ( ಹರಿದ ಬಟ್ಟೆ) ಅಂತಲೇ ಕರೆಯುತ್ತಿರುತ್ತಾರೆ.......
ಆಕೆಗೆ 12 ವರ್ಷ ಆಗುತ್ತವೇ ಅದೇ ವಾರ್ಧಾ ಜಿಲ್ಲೆಯ ಮತ್ತೊಂದು ಹಳ್ಳಿಯ ಶ್ರೀಹರಿ ಸಪ್ಕಾಲ್ ಎಂಬ ಇವರಿಗಿಂತ ಬಹಳ ಹಿರಿಯನಾದ ಓರ್ವ ವ್ಯಕ್ತಿಗೆ ಈಕೆಯನ್ನು ವಿವಾಹ ಮಾಡಿಕೊಟ್ಟು ತಂದೆ-ತಾಯಿ ಕೈ ತೊಳೆದುಕೊಂಡು ಬಿಡುತ್ತಾರೆ.
ಈ ವಿವಾಹದ ಕಾರಣದಿಂದಾಗಿ ಆಕೆಗೆ 20 ವರ್ಷ ಆಗುವ ಗೊತ್ತಿಗಾಗಲೇ 3 ಮಕ್ಕಳ ತಾಯಿಯಾಗಿ ನಾಲ್ಕನೇ ಮಗುವಿನ ಗರ್ಭವತಿಯಾಗಿರುತ್ತಾರೆ.
ಈ ವೇಳೆ ಅವರ ಬದುಕಿನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ.....
ಹಸುವಿನ ಸಗಣಿಯಿಂದ ಬೆರಣಿ ತಟ್ಟಿ ಅದನ್ನು ಇಂಧನವಾಗಿ ಬಳಸುವುದು ನಿಮಗೆಲ್ಲ ಗೊತ್ತೇ ಇದೆ, ಕೆಲವರು ಇಡೀ ಊರಿನಿಂದ ಸಗಣಿ ಸಂಗ್ರಹಿಸಿ ಅದರಿಂದ ಬೆರಣಿ ತಟ್ಟಿ ಅದನ್ನು ಮಾರಾಟ ಮಾಡುತ್ತಿರುತ್ತಾರೆ, ಆದರೆ ಇದರಿಂದ ಬಂದ ಲಾಭದಲ್ಲಿ ನಯಾಪೈಸೆಯ ಹಣವನ್ನೂ ಯಾರಿಂದ ಸಗಣಿ ಸಂಗ್ರಹಿಸಲಾಗುತ್ತದೆಯೋ ಅವರಿಗೆ ಕೊಡುತ್ತಿರುವುದಿಲ್ಲ, ಸಿಂಧೂತಾಯಿ ಇದರ ವಿರುದ್ದ ಹೋರಾಡುತ್ತಾರೆ, ಇದರಿಂದಾಗಿ ಅಲ್ಲಿನ District collector ಬೆರಣಿ ಮಾರುತ್ತಿದ್ದವರ ವಿರುದ್ದ ಆದೇಶ ಹೊರಡಿಸುತ್ತಾನೆ, ಇದರಿಂದ ಕುಪಿತರಾದ ಬೆರಣಿ ವ್ಯಾಪಾರ ಮಾಡುತ್ತಿದ್ದವರು ಆಕೆಯ ಗಂಡನಿಗೆ ಇವರ ಬಗ್ಗೆ ಚಾಡಿ ಹೇಳುತ್ತಾರೆ.
ಅಷ್ಟೇ..... ಆಕೆಯ ಗಂಡ ಒಂಭತ್ತು ತಿಂಗಳ ತುಂಬು ಗರ್ಭಿಣಿಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ, ಮತ್ತು ಗಂಡ ಮನೆಯಿಂದ ಹೊರಗೆ ಹಾಕಿದ್ದರಿಂದ ಆಕೆಯ ತವರೂ ಕೂಡ ಅವರನ್ನು ಒಪ್ಪಿಕೊಳ್ಳೋದಿಲ್ಲ.....
ಇದರಿಂದ ಸಿಂಧೂತಾಯಿ ಅಕ್ಷರಶಃ ಒಬ್ಬಂಟಿಯಾಗುತ್ತಾರೆ ಮತ್ತು ಇದರಿಂದ ದನದ ಕೊಟ್ಟಿಗೆಯಲ್ಲಿ ಮಗುವಿಗೆ ಜನ್ಮ ನೀಡುವ ಮತ್ತು ಕಲ್ಲಿನಿಂದ ಜಜ್ಜಿ ಕರುಳ ಬಳ್ಳಿಯನ್ನು ಬೇರ್ಪಡಿಸುವ ಪರಿಸ್ಥಿತಿ ಆಕೆಗೆ ಬರುತ್ತದೆ.
ಆಕೆ ಭಿಕ್ಷೆ ಬೇಡಿ ತನ್ನ ಮಕ್ಕಳ ಹೊಟ್ಟೆ ಹೊರೆದುಕೊಳ್ಳಲು ಶುರು ಮಾಡುತ್ತಾರೆ, ಹಾಗೆಯೇ ನಾಲ್ಕು ಮಕ್ಕಳ ಜೊತೆ ಇದ್ದ ಒಂಟಿ ಹೆಣ್ಣು ಆಕೆಯಾಗಿದ್ದರಿಂದ ಯಾರಾದರೂ ತನಗೆ ತೊಂದರೆ ಕೊಡಬಹುದೆಂಬ ಭಯದಿಂದ ಆಕೆ ಸ್ಮಶಾನದಲ್ಲಿ ದಿನ ದೂಡಲು ಶುರು ಮಾಡುತ್ತಾರೆ.
ದಿನದ ವೇಳೆಯಲ್ಲಿ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಭಿಕ್ಷೆ ಬೇಡುವುದು ಮತ್ತು ರಾತ್ರಿಯ ವೇಳೆಯಲ್ಲಿ ಸ್ಮಶಾನದಲ್ಲಿ ಸಮಯ ಕಳೆಯುವುದು ಅವರ ದಿನಚರಿಯಾಗುತ್ತದೆ.
ಆಕೆಗೆ ಹಸಿವು ಗೊತ್ತಿದ್ದುದರಿಂದ ಆಕೆಯೇ ಭಿಕ್ಷೆ ಬೇಡುತ್ತಿದ್ದರೂ ಬೇರೆಯವರು ಹಸಿವು ಎಂದಾಗ ತನ್ನ ಬಳಿ ಇದ್ದ ಆಹಾರವನ್ನು ಹಂಚಿ ತಿನ್ನುವ ಅಭ್ಯಾಸ ಶುರು ಮಾಡುತ್ತಾರೆ, ಮತ್ತು ರೈಲು ನಿಲ್ದಾಣದಲ್ಲಿ ಯಾರೂ ಗತಿ ಇಲ್ಲದ ಮಕ್ಕಳು ಮತ್ತು ಅನಾಥರನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳುತ್ತಾರೆ, ಮತ್ತು ಅಂಥವರಿಗಾಗಿ ಹೆಚ್ಚು, ಹೆಚ್ಚು ಭಿಕ್ಷೆ ಬೇಡಿ ಅವರ ಹೊಟ್ಟೆಯನ್ನೂ ತುಂಬಿಸುವ ಕೆಲಸ ಮಾಡುತ್ತಾರೆ.
ಹೀಗೆ ಶುರುವಾದ ಅವರ ತಾಯ್ತನ ಸೇವೆ ಮಾಡಬೇಕೆಂಬ ಒಂದೇ ಒಂದು ಹೆಬ್ಬಯಕೆ ಮತ್ತು ಕರುಣೆ ಇದ್ದುದರಿಂದ ಇಂದು 1500 ಅನಾಥರ ಮತ್ತು ಮಕ್ಕಳ ತಾಯಿಯಾಗುವ ವರೆಗೆ ಅವರನ್ನು ತಂದು ನಿಲ್ಲಿಸಿದೆ.
ಓದಬೇಕೆಂಬ ಬಯಕೆ ಇದ್ದರೂ ಬಡತನದ ಕಾರಣದಿಂದ ಅವರಿಗೆ ಓದಲಾಗುವುದಿಲ್ಲ, ಅವರು ಕೇವಲ ನಾಲ್ಕನೇ ತರಗತಿ ಪಾಸು ಮಾಡುವುದರಲ್ಲೇ ತೃಪ್ತಿ ಪಡಬೇಕಾಗುತ್ತದೆ.
ಆದರೆ ಆಕೆ ತಾನು ಆಶ್ರಯ ಕೊಟ್ಟ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುತ್ತಾರೆ, ಹಾಗಾಗಿ ಇಂದು ಅವರ ಮಕ್ಕಳಲ್ಲಿ ಅನೇಕರು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇವರ ಅನಾಥಾಲಯದ ಮತ್ತೊಂದು ವಿಶೇಷತೆಯೆಂದರೆ ಇವರು ತಮ್ಮ ಮಕ್ಕಳನ್ನು ಮದುವೆಯಾಗುವ ವರೆಗೆ ಅಥವಾ ಉದ್ಯೋಗ ಪಡೆಯುವ ವರೆಗೆ ಅವರೇ ಸಾಕುತ್ತಾರೆ.
ಅನಾಥ ಮಕ್ಕಳೊಂದಿಗೆ ತನ್ನ ಮಕ್ಕಳೂ ಬೆಳೆದರೆ ತನ್ನ ತಾಯಿ ಹೃದಯ ಅನಾಥ ಮಕ್ಕಳಿಗೆ ಮೋಸ ಮಾಡಿ ತನ್ನ ಮಕ್ಕಳನ್ನು ಮಾತ್ರ ಚೆನ್ನಾಗಿ ಬೆಳೆಸುವಂತೆ ಮಾಡುತ್ತದೆಂಬ ಕಾರಣಕ್ಕಾಗಿ ತಮ್ಮ ಸ್ವಂತ ಮಗುವನ್ನು ಇತರರ ವಶಕ್ಕೆ ಒಪ್ಪಿಸಿ ತಾನು ಮಾತ್ರ ಅನಾಥ ಮಕ್ಕಳ ತಾಯಿಯಾದ ತ್ಯಾಗಮಯಿ ಈಕೆ....
ಇಂದು ಇವರ ಅನಾಥಾಶ್ರಮದಲ್ಲಿ ಬೆಳೆದ ಅನೇಕ ಮಕ್ಕಳು ( ಇವರ ಸ್ವಂತ ಮಗಳನ್ನೂ ಸೇರಿಸಿ) ತಮ್ಮದೇ ಅನಾಥಾಲಯಗಳನ್ನು ನಡೆಸುತ್ತಿದ್ದಾರೆ, ಇವರ ಮೇಲೆಯೇ ಒಂದು PHD ಯನ್ನು ಇವರ ಮಕ್ಕಳೇ ಮಾಡುತ್ತಿದ್ದಾರೆ.
ಇವರ ಅನಾಥಾಲಯಗಳಿಗೆ ನಯಾಸೈಸದ ಸರ್ಕಾರೀ Grant ಬರುವುದಿಲ್ಲ.....
ತಮ್ಮ ಜೀವನದ ನಲವತ್ತಕ್ಕೂ ಹೆಚ್ಚಿನ ವರ್ಷವನ್ನು ಇವರು ಕೇವಲ ಅನಾಥರ ತಾಯಿಯಾಗಿಯೇ ಕಳೆದಿದ್ದಾರೆ....
ತನ್ನ ಕಷ್ಟದ ದಿನಗಳಲ್ಲಿ ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟ ತನ್ನ ಪತಿ ಮರಳಿ ತಮ್ಮ ಬಳಿ ಬಂದಾಗಲೂ ಆತನನ್ನು ಕ್ಷಮಿಸಿ ಆತನನ್ನೂ ಒಪ್ಪಿಕೊಂಡ ಕ್ಷಮಯಾ ಧರಿತ್ರಿ ಈಕೆ.
ಇವರ ಜೀವನವನ್ನು ಆಧರಿಸಿದ ಮರಾಠಿ ಸಿನಿಮಾ ಕೂಡ ತೆರೆಗೆ ಬಂದಿದೆ
ಇವರು ಇಂದು ದೇಶದ ಪ್ರಭಲ ನಾರೀಶಕ್ತಿಯಾಗಿ ತಮ್ಮ ಯಶೋಗಾಥೆಯನ್ನು ದೇಶ ವಿದೇಶಗಳಲ್ಲಿ ಸಾರಿದ್ದಾರೆ.
ಇವರ ಸೇವೆಯನ್ನು ಅನೇಕ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯ ಗುರುತಿಸಿ ಅನೇಕ ಪ್ರಶಸ್ತಿಗಳು ಗೌರವ ಡಾಕ್ಟರೇಟ್ ಪದವಿ ನೀಡಿದರೂ ಸರ್ಕಾರ ಇವರನ್ನು ಮತ್ತು ಇವರ ಸೇವೆಯನ್ನು ಗುರುತಿಸಿದ್ದು ತಡವಾಗಿಯೇ....
ಆದರೆ ತಡವಾಗಿಯಾದೂ ಇಂತಹ ಅದ್ಭುತ ಸಾಧಕಿಯೋರ್ವರನ್ನು ಸರ್ಕಾರ ಗುರುತಿಸಿದೆ ಎಂಬುದೇ ಸಮಾಧಾನಕರ ವಿಷಯ.
ಇವರಿಗೆ 2017 ರಲ್ಲಿ ನಾರೀಶಕ್ತಿ ಪುರಸ್ಕಾರವನ್ನೂ, 2021 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ....
ಇಷ್ಟೇ ಇಲ್ಲ ಅವರು ಅಮರಾವತಿ ಜಿಲ್ಲೆಯಲ್ಲಿ ಇರುವಾಗ ಅಲ್ಲಿನ 84 ಹಳ್ಳಿಗಳ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಾರೆ.
ಈಗ ಹೇಳಿ.... ಇಂಥಹ ಅಸಾಧಾರಣ ವ್ಯಕ್ತಿತ್ವದ ಬಗ್ಗೆ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ......?
ಬೇಜಾರು ಮಾಡಿಕೊಳ್ಳಬೇಡಿ... ನಿಮಗೆ ಇವರ ಬಗ್ಗೆ ಗೊತ್ತಿಲ್ಲದಿರುವುದು ನಿಮ್ಮ ತಪ್ಪಲ್ಲ.... ಬದಲಿಗೆ ನಮ್ಮ ವ್ಯವಸ್ಥೆಯ, ನಮ್ಮ ಶಿಕ್ಷಣದ ತಪ್ಪು, ಇಂಥಹ ತೆರೆಮರೆಯ ಸಾಧಕರನನ್ನು ಮಕ್ಕಳಿಗೆ ಪರಿಚಯಿಸಬೇಕಾದ್ದು ನಮ್ಮ ಶಿಕ್ಷಣ ವ್ಯವಸ್ಥೆಯ ಕರ್ತವ್ಯ, ಅದು ಅದರ ಕರ್ತವ್ಯವನ್ನು ನಿರ್ಹಹಿಸುತ್ತಿಲ್ಲ ಅಷ್ಟೇ.
ಈಗ ಜಾರಿಯಾಗಿರುವ NEP ಯಿಂದಾದರೂ ಇಂಥವರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಕೆಲಸವಾದರೆ ನಾವು ಸಮಾಜಕ್ಕಾಗಿ ಮಿಡಿಯುವ ಇನ್ನಷ್ಟು ಮನಸ್ಸುಗಳನ್ನು ಹುಟ್ಟು ಹಾಕಬಹುದು.
ಕೊನೆಯದಾಗಿ ಅನಾಥರ ಸೇವೆಯಲ್ಲಿ ತೊಡಗಿರುವ ಆ ಮಹಾತಾಯಿಗೆ ನನ್ನ ನಮನಗಳು.