30/05/2024
'ಧರ್ಮವು ಅನೇಕ ರೀತಿಯ ಪವಿತ್ರ ವಿಷಯಗಳಿಗೆ ಸಂಬಂಧಿಸಿದೆ. ಧರ್ಮವು ಆಗೋಚರ ಶಕ್ತಿಗಳ ಮೇಲೆ ಇರುವ ನಂಬಿಕೆ.' ಎಂಬ ಸಮಾಜಶಾಸ್ತ್ರಜ್ಞರ ಮಾತುಗಳಿಗೆ ದೃಷ್ಟಾಂತಗಳು ಇಲ್ಲಿ ತುಳುನಾಡಿನಲ್ಲಿ ವಿಫುಲವಾಗಿ ದೊರಕುತ್ತವೆ. ಆದಿ ಆಲಡೆ ಮೂಲತಾನಗಳ, ನಾಗಬಿರ್ಮೆರ್ ಮತ್ತು ಪರಿವಾರ ದೈವಗಳು ಕೂಡಾ ಮೂಲತಃ ಅಗೋಚರ ಶಕ್ತಿಗಳು. ಆದಿ ಆಲಡೆಯ ಪ್ರಧಾನ ದೈವ 'ಬಿರ್ಮೆರ್', 'ಬೆರ್ಮೆರ್ ಆಳುಪ ದೊರೆಗಳ ಒಂದಿಲ್ಲ ಒಂದು ಕುಲ ದೈವ ಆಗಿರಬೇಕು ಆದಿ ಆಲಡೆಯ ಬೆರ್ಮೆರ್ ಮತ್ತು ಪರಿವಾರ ದೈವಗಳು ತುಳುವರ ಕುಲದೈವಗಳಾಗಿವೆ. ಮಾನವ ಮೊತ್ತ ಮೊದಲು ಆರಾಧಿಸಿದ ಪ್ರಾಣಿ ನಾಗ. ತುಳುವರ ಹಿರಿಯರು ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯನ್ನು ರೂಢಿಸಿಕೊಂಡ ಕ್ಷೇತ್ರದ ದೈವ ನಾಗ ಕೃಷಿ ಕ್ಷೇತ್ರದ ರಕ್ಷಕ, ವೈಜ್ಞಾನಿಕವಾಗಿಯೂ ನಾಗ ಭತ್ತದ ಗದ್ದೆಯಲ್ಲಿರುವ ಇಲಿಗಳು ಮತ್ತು ಸಣ್ಣ ಪುಟ್ಟ ಪ್ರಾಣಿಗಳಿಂದ ಬೆಳೆದು ನಿಂತ ಭತ್ತದ ಪೈರನ್ನು ರಕ್ಷಿಸುತ್ತದೆ. ಇಲ್ಲಿಯ ಹಲವು ಆಚರಣೆಗಳು ನಾಗನಿಗೂ ಕೃಷಿಗೂ ಇರುವ ನಂಟನ್ನು ರುಜುವಾತು ಮಾಡುತ್ತವೆ. ಕೃಷಿಗೆ ಸಂಬಂಧಿಸಿದಂತೆ ನಾಗನ ಬಹುಮುಖೀ ಆರಾಧನೆಯನ್ನು ತುಳುನಾಡಿನಲ್ಲಿ ಈಗಲೂ ಕಾಣಬಹುದು. “ಸಾರತ್ತೊಂಜಿ ಭೂತ, ನೂತ್ರ (ನೂರಾರು) ಗಂಡ ಗಣೊಕುಲು ಬಿರ್ಮರ ಪರಿವಾರ” ಬಾಕುಡರ ಕೋಲದಲ್ಲಿ, ಪಾಣರಾಟದಲ್ಲಿ ಜಾಲಾಟದಲ್ಲಿ, ಕಾಡ್ಯನಾಟದಲ್ಲಿ ಅನೇಕ ದೈವಗಳ ಕೋಲವನ್ನು 'ಕಲ'ದಲ್ಲಿ ನೋಡಬಹುದು. 'ನಾಗಬಿರ್ಮೆರ' ಕೋಲ ಆದ ಮೇಲೆ ಉಳಿದ ದೈವಗಳಿಗೆ ಕೋಲ ಆಗುತ್ತದೆ, ವೈದಿಕ ಪ್ರಭಾವಕ್ಕೆ ಒಳಗಾದ 'ದೆಯೊಲೆ ನಲೆ'ಯಲ್ಲಿ ನಾಗಬೆರ್ಮರಿಗೆ ಕೋಲ ಇಲ್ಲ. ಪಾತ್ರಿಯ ಸೇವೆ ಇದೆ. ಆದರೆ 'ಗಂಡ ಗಣಗಳು' ಮಾತ್ರವಲ್ಲ ವೈದಿಕ ದೇವರಿಗೂ “ಹಗಲುವೇಷ” ಇದೆ. ಇವು 'ಬೆರ್ಮರ ಗುಂಡ ಗದ್ದುಗೆಯ ಬಳಿ, ಬಲಿ ನೇಮ ನಡೆಯುವ ದೈವಗಳು ಈ ವಿವರಗಳಿಗೆ ಹೋಗುವ ಮುನ್ನ ಬೆರ್ಮೆರ್ ಪದದ ಪ್ರತತ್ತಿ, ಪರಿಕಲ್ಪನೆ, ಪರಂಪರೆಯ ಬಗ್ಗೆ ನೋಡೋಣ.
ಬಿ/ಬೆರ್ಮೆರ್ ಪದದ ವ್ಯುತ್ಪತ್ತಿ :
ಜನಪದ ಜಗತ್ತಿನ ಜನರು (ಒಳ ಭಾಗಗಳಲ್ಲಿ) ಬೆರ್ಮೆರ್ ಎಂದು ಹೇಳುವುದನ್ನು ಒಪ್ಪುವುದಿಲ್ಲ. ಕಾಸರಗೋಡು, ಬೆಳ್ತಂಗಡಿ ಕಡೆಯ ಒಳನಾಡುಗಳಲ್ಲಿ ಇರುವ ಪಕ್ಷಗಳು 'ಬೆರ್ಮರ್' ಎಂಬ ಉಚ್ಚಾರಣೆ ತಪ್ಪು, 'ಬಿರ್ಮೆರ್' ಎನ್ನಬೇಕು ಎಂದು ನನ್ನನ್ನೂ ತಿದ್ದುತ್ತಿದ್ದರು. ಮಂಗಳೂರಿನ ಕರಾವಳಿ ಕಡೆ ಬೆರ್ಮೆರೆ ಎನ್ನುವುದು ರೂಢಿ. ಹೀಗಾಗಿ ಬಿರ್ಮೆರ್ ಮತ್ತು ಬೆರ್ಮೆರ್ ಎಂಬ ಪದದಲ್ಲಿ ಪ್ರಾದೇಶಿಕ ಭಿನ್ನತೆ ಇದ್ದರೂ ಎರಡೂ ಪ್ರಯೋಗಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮೂಲ ದ್ರಾವಿಡ:
ಪೆರ್ಮೆ>ಬೆರ್ಮೆ, ಬೆರ್ಮೆ+ಇರ್ (ಪ್ರತ್ಯಯ) ಬೆರ್ಮೆರ್: ಬೆರ್ಮೆ,
ತಮಿಳು: ಪೆರ್ಮೆ = ಮಹತ್ವದ್ದು, ಶ್ರೇಷ್ಠವಾದುದು. ತುಳು ನಿಘಂಟು: ಪೆರ್ಮೆ ಅಂದರೆ ಹೆಚ್ಚುಗಾರಿಕೆ, ಹೆಮ್ಮೆ, ಬೆರಮ್ಮ ಅಂದರೆ ಉಗ್ರವಾದ, ತೀಕ್ಷ್ಮವಾದ, ಭಯಂಕರವಾದ, (ಅಸಾಧ್ಯ) ಉದಾ: 'ಅಂಗಾರದಾನೆ ವಿಷ ಪೋದು ಅಮೃತಗಳಿಗೆ ಬನ್ನಗ ಬೆರೆಟ್ ಬತ್ತಿ ಬೆರ್ಮ ಬಾರಿ ಬೇನೆ.' ('ಮಂಗಳವಾರ ವಿಷ ಹೋಗಿ ಅಮೃತ ಘಳಿಗೆ ಬಂದಾಗ ಬೆನ್ನಲ್ಲಿ ಬಂದ ತಡೆಯಲಾಗದ ನೋವು) ಬೆರ್ಮ ಬೆರ್ಮೆರ್, ಬೆರ್ಮೆ = ಒಂದು ದೈವದ ಹೆಸರು, ಭೂತಗಳಲ್ಲಿ ಪ್ರಮುಖನಾದವನು;
ಬೆರಿ ಮರ>ಬೆರ್ಮರ = ಏತ ನಿರಾವರಿಯಲ್ಲಿ ಇಡೀ ಏತವನ್ನು ಸಂಭಾಳಿಸುವ ಉದ್ದವಾದ ಮರ. (ಬೆರಿಬೆನ್ನು) ಬೆನ್ನಿನ ಕೋಲಿನಂತೆ ಇದು ಆಧಾರ.
ಪೆರ್ಮೆ+ಇ>ಬೆರ್ಮೆ+ಇರ್ ಆಗಿದೆ. 'ಇರ್' ಎಂಬುದು ಪ್ರತ್ಯಯ ಪದ ಗೌರವಾನ್ವಿತರನ್ನು, ಹಿರಿಯರನ್ನು ಸೂಚಿಸುವಾಗ (ಹೆಸರಿನ ಕೊನೆಯಲ್ಲಿ ಎಕಾರ ಬರುತ್ತದೆ. ಪೆರ್ಗಡೆ+ಇರ್, ಚೌಟೆ+ಇರ್ ಆಲ್ವೆ+ಇ ಇತ್ಯಾದಿ. ಆದೇ ರೀತಿ ಬೆರ್ಮೆ+ಇ ಬೆರ್ಮರ್ ಆಗುತ್ತದೆ. (ಒಯಿತ ಪೆರ್ಮೆ ಮಗಾ ಉಂದು? ಯಾವುದರ 'ಪೆರ್ಮ' ಮಗಾ ಇದು?)
ಕನ್ನಡ ನಿಘಂಟು: ಬೊಮ್ಮ, ಬರಮ, ಬರ್ಮ....: ಪರಾತ್ಪರ ವಸ್ತು. ಬೊರ್ಮ=ಒಂದು ಕ್ಷುದ್ರ ದೇವತೆ. ಬೊಮ್ಮ ಜಟ್ಟಿಗ = ಒಂದು ಕ್ಷುದ್ರದೇವತೆ. ಬೆರ್ಮೆರೆ ಪೆರ್ಮೆ: ಕೆಲವು ನುಡಿಗಟ್ಟುಗಳು ಬೆರ್ಮೆರ ಪೆರ್ಮೆಯನ್ನು > ಮಹತ್ತನ್ನು, ಬೃಹತ್ತನ್ನು ಈ ಕೆಳಗಿನಂತೆ ನಿರೂಪಿಸಿವೆ: “ಬೆರ್ಮೆರೆಗ್ ಪೂ ಪೂಜನ ಕರಿತ್ದ್ 'ಮರಕ್ಕೆ ಅಲಂಗಿ ಆಲಸ್' ಕಯ್ಪುನಗ ತರೆಪೋಂಡು ಕಾಂತೇಸೊಗು, ಕೊಡಿ ಪೋಂಡು ಕೋಟೇಸೊಗು" (ಬೆರ್ಮೆರ ಪೂ ಪೂಜನ ಮುಗಿದು ಮರಕ್ಕೆ 'ಅಲಂಗಿ ಅಲಸ್' ಬಿಗಿಯುವಾಗ' ಹೆಡೆ ಹೋಯಿತು. ಕಾಂತೇಶ್ವರಕ್ಕೆ ಬಾಲ ಹೋಯಿತು ಕೋಟೇಶ್ವರಕ್ಕೆ) ಬಾಕುಡರ ನಾಗಬ್ರಹ್ಮ ಕೋಲದಲ್ಲಿ ಮರಿ (ಮರಿಯ ಮಾಧ್ಯಮ) ಮರ ಹತ್ತಿ ತಬ್ಬಿಕೊಳ್ಳುವ ಆಚರಣೆ ಇದೆ.
“ಕೇಮಿ ಕರ್ತುಲೆ ಮಲೆತ ನಡುಟು ತಾರೆದಾತ್ ತೋರ, ಕಂಗದಾತ್ ಉದ್ದ ಉದ್ಯ ಬೆಂದೆ" (ಕೇಮಿ ಕರ್ತುಲೆ ನಾಡಿನಲ್ಲಿ ಮಲೆಯ ಮಧ್ಯೆ ತಾಳೆಯ ಮರದಷ್ಟು ದಪ್ಪ ಕಂಗಿನ ಮರದಷ್ಟು ಉದ್ದಕ್ಕೆ ಉದ್ಭವಿಸಿದರು ಬೆರ್ಮೆರ್)
“ಮಂಗ್ಲರುರ್ದ್ ಬಾರ್ಕುರು ಮುಟ್ಟ ಬಾರ್ಕೂರುರ್ದು ಮಂಗಳೂರು ಮುಟ್ಟ ಅಡ್ಡ ಲೆಕ್ಕಿಸಿರಿ, ನೀಟ ಬೆರ್ಮೆರ್, ನೀರ್ಡ್ ಕನೈಲು (ಸಿರಿಗಳು.)” ಉದ್ಯ ಬೆಂದ'. (ಮಂಗಳೂರಿನಿಂದ ಬಾರ್ಕೂರುವರೆಗೆ ಬಾರ್ಕೂರಿನಿಂದ ಮಂಗಳೂರಿನವರೆಗೆ ಅಡ್ಡಕ್ಕೆ ರೆಕ್ಕೆಸಿರಿ, ನೀಟಕ್ಕೆ ಬೆರ್ಮೆರ್, ನೀರಿನಲ್ಲಿ ಕನೈಯರು ಉದ್ಭವವಾದರು)
ಮರಿ :
ತುಳು ಭಾಷೆಯಲ್ಲಿ ಶ್ರೇಷ್ಠ ಜಾತಿಯ ನಾಗರಹಾವನ್ನು 'ಮರಿ' ಎಂದು ರೂಢಿಯಲ್ಲಿ ಕರೆಯುತ್ತಾರೆ.
ತುಳು ನಿಘಂಟು: ಮರಿ = ನಾಗರ ಹಾವು; ಮರಿಕಲ್ = ನಾಗನ ಶಿಲಾಮೂರ್ತಿ, ಮರಿಕಾಪು = ಸರ್ಪಗಾವಲು, ಮರಿತ ಕುರ್ಲೆ=ಹಾವಿನ ಮರಿ, ಮರಿತ ಕುರ್ಲೆ=ನಾಗರ ಹಾವಿನ ಮರಿಗಳು, ಮರಿ ಮೀನು=ಹಾವಿನಂತಿರುವ ಮೀನು ಮರಿ ಎಂದರೆ ನಾಗರ ಹಾವು ಹೀಗೆ ಅರ್ಥ ವಿವರಣೆ ಇದೆ. ಮಳೆಗಾಲವನ್ನು ಇದೆ. ಮಳೆಗಾಲವನ್ನು ತುಳು ಭಾಷೆಯಲ್ಲಿ 'ಮರಿಯಾಲ' ಎನ್ನುತ್ತಾರೆ.
ನಾಗರಹಾವನ್ನು ಪರಪುನ ಎಂದು ರೂಢಿಯಲ್ಲಿ ಕರೆಯುತ್ತೇವೆ. ನಾಗರಹಾವು, ಕಣ್ಣಿನ ಮುಂದೆ ಹರಿದಾಡಿದರೆ ಹೆಸರು ಹಿಡಿದು ಹೇಳಬಾರದು ಎಂಬ ನಿಷೇಧ ಇದೆ, 'ಪರಪುನ ಅಂದರೆ ಹರಿಯುವಂತಹದು, ನೀರು ಪರಪುನು; ಹಾವೂ ಪರಪುನು. ಪರಪು ನೀರ್ಗ್ ದೋಷ ಇದ್ದೆ" "ನಾಗ ಎಂಬ ಶಬ್ದವಾಗಲೀ, ನಾಗ (ಸರ್ಪ) ಪೂಜೆಯಾಗಲೀ ವೇದಗಳಲ್ಲಿ ಅಥವಾ ಬ್ರಾಹ್ಮಣದಲ್ಲಿ ಹೇಳಿಲ್ಲ." ಸಂಸ್ಕೃತದಲ್ಲಿ ನಾಗರ ಅಂದರೆ, ಲಾಂಗಲ, ಅಂದರೆ ನೇಗಿಲು ಲಾಂಗಲ ಮಾಕೃತದಲ್ಲಿ 'ನಾಗರ್' ಆಗಿದೆ." ಆದಿಶೇಷನ ಅವತಾರವೆಂದು ತಿಳಿದಿರುವ ಬಲರಾಮ ಹಲಧರ. ಕಾಶ್ಮೀರದಲ್ಲಿ ನಾಗಶೇಷನ ಸಾಂಕೇತಿಕ ಚಿಹ್ನೆಯು ಸಹ ನೇಗಿಲು. ಆದರೆ ಕಾಶ್ಮೀರಿ ಭಾಷೆಯಲ್ಲಿ ನಾಗ ಅಂದರೆ ನೀರಿನ ಸೆಲೆ. (Springs) ಅನಂತ್ ನಾಗ ಎಂದರೆ ಜಲಮೂಲ ಅನಂತವಾಗಿರುವ ಸ್ಥಳ. 'ನಾಗಿನಿ' ಸರೋವರ ಕಡು ಆಳವಾಗಿ ಇರುವ ಕಾರಣ ಅದು ನೀಲಿಯಾಗಿದೆ. ಶೇಪ್ ನಾಗ್ ಕೂಡ ನೀಲಿಯಾಗಿರುವ ಸರೋವರ, ಕಾಶ್ಮೀರದ ಸರೋವರಗಳೆಲ್ಲವೂ ನಾಗನ ಬೇರೆ ಬೇರೆ ಹೆಸರನ್ನು ಹೊಂದಿವೆ. ಉದಾ: ಸಲಕ್ ನಾಗ, ಮಲಿಕ್ ನಾಗ, ನಾಗ್, ಬಾಲ ನಾಗನ ಹೆಸರಿನಲ್ಲಿ ಇತ್ಯಾದಿ (ಪವಿತ್ರ) ಸರೋವರಗಳಿವೆ.
'ಮರಿ'(ನಾಗ)ಯನ್ನು ಉಲ್ಲಾಯ, ಉ ರೂಪದಲ್ಲಿ ಆಚರಣೆಯ ಮೂಲಕ ಆರಾಧಿಸುವ ಕಾಸರಗೋಡು ತಾಲೂಕಿನಲ್ಲಿ ವಾಸಿಸುವ ತುಳುನಾಡಿನ ಬಾಕುಡರು ತಮ್ಮನ್ನು ಭೂಮಿಪ್ಪತ್ತರು ಎಂದು ಕರೆದುಕೊಳ್ಳುತ್ತಾರೆ. "ಮಹಾರಾಷ್ಟ್ರದಾದ್ಯಂತ ಎಲ್ಲೆಡೆಯೂ ವಾಸಿಸುತ್ತಿರುವ ಮಹಾರ್ ಜನಾಂಗದವರು ಪೂರ್ವ ಕಾಲದಿಂದಲೂ ತಮ್ಮನ್ನು ಭೂಮಿ ಪುತ್ರರು ಎಂದು ಕರೆದುಕೊಳ್ಳುತ್ತಲೇ ಬಂದಿದ್ದಾರೆ. ....ಮಹಾರರ ಮುಖ್ಯ ದೇವಿಯಾಗಿರುವ ಮರಿ ಆಯಿಯು ಸಹ ದಕ್ಷಿಣದಲ್ಲಿನ ಆದಿಮ ಮಾತೃದೇವತೆಗಳಲ್ಲಿ ಒಬ್ಬಳು, ನಿರ್ಮಿಸಿ ಮತ್ತು ಸಂಹಾರಕ್ಕೂ ಇವಳೇ ಕಾರಳಾಗಿದ್ದಾಳೆ ಎಂಬ ತುಂಬು ಶ್ರದ್ಧೆಯು ಇವರ ಜೀವನದಲ್ಲಿ ಬೇರೂರಿರುವುದು ಸ್ಪಷ್ಟ 'ಮಾರಿ' ಎಂಬ ತಮಿಳು ಶಬ್ದವು ವರ್ಷಾವಾಚಕ (ಮಳೆಯ ಅಧಿದಾತ್ರಿ)ವಾಗಿದ್ದು, ದಾಕ್ಷಿಣಾತ್ಯ ತಮಿಳು ಶಬ್ಬವು ಪರ್ಜನ್ಯ ದೇವರನ್ನು ವರ್ಷಣಶೀಲಗೊಳಿಸುವುದೇ ಎಂಬುದಾಗಿ ಸೃಷ್ಟಿಕರಿಸಲಾಗಿದೆ.* ಮೂಲ ದ್ರಾವಿಡದಿಂದ ಹೊರಬಂದ ತುಳು ಭಾಷೆಯಲ್ಲೂ ಮಳೆಗಾಲವನ್ನು 'ಮರಿಯಾಲ' ಎನ್ನುತ್ತಾರೆ. ಮರಿ ದ್ರಾವಿಡ ಮೂಲದ ಪದವಾಗಿದ್ದು ನೀರು ಎಂದರೆ ಜಲದೇವತೆ, ನೀರ್ ಕನ್ಯ, ನಾಗಕನ್ಯ, ಮಹಾರರ ದೇವಿಯ ಮರಿ ಆಯಿಯಂತೆ ತುಳುವರ ಮೂಲತಾನದ ಮರಿಪರಿವಾರಗಳೂ ಸೃಷ್ಟಿ ಮತ್ತು ಲಯಕ್ಕೆ ಕಾರಣರು ಎಂದು ನಂಬಲಾಗಿದೆ. ತುಳುನಾಡಿನಲ್ಲಿ ಮೀನುಗಾರರನ್ನು 'ಮರಕಲ'ರು ಎನ್ನುವ ರೂಢಿ ಇದೆ. ದುಡಿಯುವವರು ಮರಕಲರು. 'ಮರಕಲ= ನೀರಿನ+ಕಲ(ಸ್ಥಳ) ನೀರಿನ ಕಲದಲ್ಲಿ
ಡಾ. ರಾಮಚಂದ್ರ ಚಿಂತಾಮಣ ಡೇರೆಯವರು “ಮರಾಠರ ನಿಜವಾದ ಸಂಸ್ಕೃತಿ ಆರ್ಯೇತರವಾದುದು.' ಎಂದು ಸಾಧಾರವಾಗಿ ತೋರಿಸಿಕೊಟ್ಟಿದ್ದಾರೆ. ಗೋದಾವರಿ ಕೃಷ್ಣಾ-ತುಂಗಭದ್ರಾ ನದಿಗಳ ಭೂಮಿಯಲ್ಲಿ ನಿರ್ಮಾಣಗೊಂಡ ಈ ಸಂಸ್ಕೃತಿಯು ಒಂದೇ ! ಕನ್ನಡ-ಮರಾಠಿ-ತೆಲುಗು ಹೀಗೆ ಭಿನ್ನ ಭಿನ್ನ ಭಾಷೆಗಳನ್ನು ಆಡುತ್ತಿರುವ ಜನಾಂಗ ವಾಗಿರುವರಷ್ಟೇ ಎಂಬುದನ್ನು ಬೇರೆ ಬೇರೆ ಆಕರಗಳಿಂದ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಬೆರ್ಮೆರ್ ನೆಲ ಜಲಗಳ ಒಡೆಯ, ಉಲ್ಲಾಯ, ಪರಪುನ ಎಂಬುದು ಸರೀಸೃಪಗಳಿಗೆ ಅನ್ವಯಿಸುವಂತೆ ನೀರಿಗೂ ಅನ್ವಯಿಸುತ್ತದೆ. ಮರಿ+ಆಲ>ಮರಿಯಾಲ, ಮರಿಯಾಲ ಅಂದರೆ ಮಳೆಕಾಲ (ತುಳು).
ನರಾಯಣ ನಾಗ: ನಾಗಬೆರ್ಮರನ್ನು ಕುಲದೇವರಾಗಿ ಉಪಾಸಿಸುವ ತುಳುವರಲ್ಲಿ ನರಯನ ಬಳಿ/ವಂಶ ಇದೆ. ನಾರೆ ಎಂಬುದು ತುಳುವರಲ್ಲಿ ರೂಢಿಯಲ್ಲಿ ಇದ್ದ ಹೆಸರು. ನಡೆಯಿನೆ-ನಾರೆ, 'ನರನ ದೇವರೆ' ಎಂಬುದು ಉದ್ದಾರ. ನನ್ನಮ್ಮ ಹೇಳಿದ ತುಳು ಜನಪದ ಕಥೆಯಲ್ಲಿ ಒಬ್ಬ ಹೆಂಗಸು ಸರ್ಪಕ್ಕೆ ಜನ್ಮ ನೀಡುತ್ತಾಳೆ. ಸರ್ಪ ಅಲ್ಲಿ ನಿಲ್ಲದೆ 'ತನ್ನನ್ನು ಕರೆದಾಗ ಬರುತ್ತೇನೆ' ಎಂದು ತಾಯಿಗೆ ಹೇಳಿ ಸರಿದು ಹೋಗುತ್ತದೆ. ಆಕೆ ತನಗೆ ಮಗನನ್ನು ನೋಡಬೇಕೆನಿಸಿದಾಗ 'ಓಲ್ಲ. ಮಗ ನರಯನ ಗೈಲ್ ಗೈಲ್ ಬಲ್ಲ ಎಂದರೆ ಅದು ಸರ ಸರ ಬರುತ್ತಿತ್ತು. ಹಿಮಾಲಯದ ಕುಲೂ ಕೊಳ್ಳದ ಜಾನಪದದಲ್ಲೂ ಹಾವಿಗೆ 'ನಾರಾಯಣ' ಎಂದು ಹೆಸರು ಎನ್ನುತ್ತಾರೆ ಶಂಬಾರವರು.' ನರಯನ ಎಂಬ ಹೆಸರಿನ ತಂದೆ ಮತ್ತು ತಾಯಿ ಮುಂಗುಲಿ ಹೆಂಗುಸು ಸರ್ಪಸಂತಾನಕ್ಕೆ ಜನ್ಮ ನೀಡುವ ಪಾಡ್ಡನ ಇದೆ. ಆಕೆ ಒಂದನೇ ಬೇನೆಗೆ ಒಂದು ಮಾಲೆ ತತ್ತಿ, ಎರಡನೆ ಬೇನೆಗೆ ಎರಡು ಮಾಲೆ ತತ್ತಿ " ಹೀಗೆ ನೂರಾರು ಹಾವುಗಳಿಗೆ ಜನ್ಮ ನೀಡುತ್ತಾಳೆ. ನರಯಣ ದೇವರ ಮಗ ಸರ್ಪ ಎನ್ನುವ ವಿವರ ಬೇರೆ ಪಾಡ್ಡನದಲ್ಲೂ ಇದೆ. “ಅಣ್ಣಪ್ಪ ರಾಜ್ಯದ ನಾರಾಯಣ ದೇವರು ಮತ್ತು ಮುಂಗುಡೆ ದೆಯ್ಯಾರು ಗಂಡ ಹೆಂಡತಿ, ಮುಂಗುಡೆ ದೆಯ್ಯಾರು ಇಟ್ಟ ಮೊಟ್ಟೆಗಳೇ ಸರ್ಪ ಸಂತಾನ ಈ ಪಾಡ್ದನಗಳಲ್ಲಿವೆ.
ಕುಮಾರನನ್ನು ನಾಗ ಎನ್ನುತ್ತಾರೆ. “ದರ್ಶನ ಸಂದರ್ಭದಲ್ಲಿ ಕುಮಾರನನ್ನು ಸಿರಿಗಳು, ನರಾಯಿನಾ ...ನರಾಯಿನಾ ಬಿರ್ಮೆರೇ, ಅನ್ನೇರ್, ಬಿರ್ಮೆರೇ, ಎಂದು ಸಂಬೋಧಿಸುತ್ತವೆ.” ಕುಮಾರ ಅಂದರೆ 'ಏರ್ಮರೆ ಮಾನಿ' ಎಂಬುದು ಇಲ್ಲಿಯ ನಂಬಿಕೆ. 'ಸೋ ನರಾಯಿನಾ' ಎಂದು ಕರೆಯುವಾಗ ಕುಮಾರ ಪ್ರತಿಕ್ರಿಯಿಸುತ್ತಾನೆ. ಇಲ್ಲಿ ಸಿರಿ ಪಾತ್ರಿಗಳು ಹೇಳುವ 'ನರಯಣ' ಬೆರ್ಮರನ್ನೇ ಕುರಿತು ಆಗಿರಬೇಕು ಎಂದು ಕ್ಲಾಸ್ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. 'ಮಕ್ಕಳಾಗದಿರುವಾಗ ನಾಗ ಬಲಿ-ನಾರಾಯಣ ಬಲಿ' ಎಂಬ ತಂತ್ರ ವಿಧಾನ ಮಾಡಿಸುವ ಸಂಪ್ರದಾಯವಿದೆ. ನಾರಾಯಣ ಎಂಬುದು ನಾಗನ ಪರ್ಯಾಯ ನಾಮವೆಂಬುದನ್ನು ಇಲ್ಲಿ ಮನಗಾಣಬಹುದು. 'ಅದಿತಿ ನಾಗ ಮಣಿ ಎಂದು ಈ ಮೊದಲು ಸೂಚಿಸಿದೆ. ಇದರಂತೆ ಪದ್ಮ, (ಅಪ್ಪ ಅವ್ವ) ಕಮಲ, ಅರವಿಂದ, ಪುಂಡರೀಕಾದಿ ನಾಮಗಳೂ 'ನಾಗ ಸಂಪ್ರದಾಯ'ಕ್ಕೆ ಸಂಬಂಧಿಸಿದವುಗಳು ಆಗಿವೆ.”
"ನಾರಾಯಣ ಬಂಗೇರರ ಮನೆಯನ್ನು ಪ್ರವೇಶಿಸಲು ಏಳು ಬಾಗಿಲುಗಳಿವೆ. ಏಳು ಬಾಗಿಲುಗಳಿಗೆ ಏಳು ಕಾವಲುಗಳಿವೆ. ನಾಯಿ, ಹುಲಿ, ಕರಡಿ, ಏಳು ಹೆಡೆಯ ಸರ್ಪ, ಸಂಕಪಾಲಿ ಹಾವು, ಗೊಂಬೆಗಳು ಮತ್ತು ಹೆಂಗುಸರು.”
“ನಾರಕನು. ನಾಗರೂಪನೆಂಬುದು ಪುರಾಣ ಕಥೆಗಳಲ್ಲಿ ಬಚ್ಚಿ ಉಳಿದಿದೆ! ನಾನು ಸರ್ಪನೆಂದರೆ ನಾರಣನೂ ಸರ್ಪನೆಂಬುದು ಬಯಲಿಗೆ ಬರಲಿದೆ. ನಾರ ಮತ್ತು ನರ, ಇವು ಎರಡೂ ಅಭಿನ್ನ ನಾಗಪ್ರತಿಮೆಯ ಎರಡು ರೂಪಗಳು ಎಂಬುದು ಇಲ್ಲಿ ದೃಢಪಡುತ್ತಿದೆ.
ಹಲವು ಶಾಸನಗಳು ನಾರಾಯಣ ದೇವರ ಬಗ್ಗೆ ಉಲ್ಲೇಖಿಸುತ್ತವೆ. ಸಿರಿಯಾರದ ಶಾಸನದಲ್ಲಿ ನಾರಾಯಣ ದೇವರನ್ನು ಹಲರ ಕುಲಸ್ವಾಮಿ ಎನ್ನುತ್ತದೆ. "....ನಾರಾಯಣ ದೇವರಿಗೆ ಆಚಂದ್ರಾರ್ಕ ಸ್ಥಾಯಿಯಾಗಿ (ಸಾಲು 23ರಲ್ಲಿ) ಶಾಸನ ಬರೆಸಿಕೊಟ್ಟ ಹರವರಿಯನು ಆ ಹಲರು ಕಟ್ಟಳೆಯವರು ತಂಮ ಕುಲಸ್ವಾಮಿಯಹ ಶ್ರೀನಾರಾಯ ದೇವರಲ್ಲಿ ರಾಯರಿಗೆ ಲೇಸಹಂತಾಗಿ... ಇಲ್ಲಿಯ ಅನೇಕ ಶಾಸನಗಳು, ನಾರಾಯಣ ದೇವಸ್ಥಾನ-ದೇವರನ್ನು ಉಲ್ಲೇಖಿಸುತ್ತವೆ.
ಬೆರ್ಮೆರ್ ಮತ್ತು ಪರಿವಾರ ದೈವಗಳ ಪರಿಕಲ್ಪನೆ
ನಾಗ ಬಿ/ಬೆರ್ಮೆರ್ ಮತ್ತು ಪರಿವಾರ ದೈವಗಳು ಎಲ್ಲ ತುಳುವರಿಗೆ ಕುಲದೈವ, ಇಲ್ಲ ಆಯಾ ಬಳಿಯ ವಂಶದವರ ಕುಟುಂಬದವರ ರಕ್ಷಕ ದೈವ, ಒಂದು ವಂಶದವರ ಹಿರಿಯರು ಪರಂಪರೆಯಿಂದ ನಂಬಿಕೊಂಡು ಬಂದಂತಹ ದೈವ ತುಳುವರ ಕುಲದೈವ 'ನಾಗ ಬಿರ್ಮೆರ್' ಆ ಕುಟುಂಬದ ಆದಿ ಅಲಡ ಮೂಲತಾನದಲ್ಲಿ ಮಾತ್ರ ಕುಲದೈವ ಇರುತ್ತದೆ ಹಾಗಾಗಿ 'ನಾಗ ಬಿರ್ಮೆರ್' ಎಂಬುದನ್ನು 'ಆಲಡೆ ಬಿರ್ಮೆರ್' ಎಂದೂ ಜನ ಹೇಳುತ್ತಾರೆ. ತಾಮ್ರಶಾಸನ (8ನೇ ಶತ.)ವು ಸಿರಿ ಆರಾಧನೆಯ ಪರಿಸರಕ್ಕೆ ಸಮೀಪವಾಗಿದ್ದು, ಆ ಶಾಸನದಲ್ಲಿ 'ಬ್ರಹ್ಮನಿಂದ ರಕ್ಷಿತನಾದ ಕುಲದಲ್ಲಿ ಅಭಿಮಾನ ಶ್ರೀಮದಾಳುವರಸ..' ಎಂದಿದೆ."
“ಸಿರಿ ಪಾಡ್ನನದಲ್ಲಿ ಬಳಕೆಯಾದ ಬೆರ್ಮೆರ್ ಹಾಗೂ ನಾಗಬೆರ್ಮೆರ್' ಎನ್ನುವ ಪದಗಳು ಕುತೂಹಲದಾಯಕವಾದುವು. ಈ ತಾಮ್ರಶಾಸನದಲ್ಲಿ ಲಿಖಿತವಾದ ಬ್ರಹ್ಮ ಅದರ ತುಳು ರೂಪ ಬೆರ್ಮರ್ (ಅಥವಾ ಬೆರ್ಮ) ಆಲುಪ ದೊರೆಗಳ ಒಂದಲ್ಲ ಒಂದು ಕುಟುಂಬದ ಕುಲದೈವವಾಗಿರಬಹುದು. ಯಾವೊಬ್ಬ ಬಾಡ್ರನಕಾರನಿಗೂ ಇದರ ಚಿತ್ರ ಐತಿಹಾಸಿಕ ಹಿನ್ನೆಲೆ ಗೊತ್ತಿಲ್ಲದಿರುವಾಗ ಇದನ್ನು ಒಂದು ಸಂದಿಗ್ಧ ದಾಖಲೆಯಾಗಿ ಮಾತ್ರ ಪರಿಗಣಿಸಬೇಕಾಗಿದೆ. ತುಳುನಾಡನ್ನು ಆಳುತ್ತಿದ್ದ ಆಳುಪ ಆಳುಕರನ್ನು ಫೀಟ್ ಮುಂತಾದವರು ನಾಗವಂಶಕ್ಕೆ ಸಂಬಂಧಿಸಿದವರೆಂದು ಅಭಿಪ್ರಾಯಪಟ್ಟಿದ್ದಾರೆ.”
“..ಈ ಆಲುಪರ ಶಿಲಾಲೇಖಗಳಲ್ಲಿ ಐದು ಹೆಡೆಯ ನಾಗನ ವಿಗ್ರಹವಿರುವುದರಿಂದ ಇವರು ಸುಬ್ರಹ್ಮಣ್ಯನ ಆರಾಧಕರೆಂದೂ ಇವರ ಕಾಲದಲ್ಲಿ ಈ ದೇಶದ ಹಲವು ಸುಬ್ರಹ್ಮಣ್ಯ ದೇವಾಲಯಗಳು ಸ್ಥಾಪಿತವಾದುವೆಂದೂ ಕಂಡು ಬರುವುದರಿಂದಲೂ ಮಹಾಕೂಟರ ಸಂಭದಲ್ಲಿಯ ಚಳುಕ್ಯರ ಶಾಸನದಲ್ಲಿ ಇವರು ನಾಗವಂಶೀಯರೆಂದಿರುವುದರಿಂದಲೂ ಇವರು ನಾಗರಾಜನಾದ ಹರೀತನ ವಂಶದವರಾಗಿರಬಹುದೆಂದೂ ಬಹುಶಃ ಆ ಕಾರಣದಿಂದ ಈ ವಂಶದವರು ನಾಗ ಜಾತಿಯೊಂದಿಗೆ ಆಗಾಗ್ಗೆ ಶರೀರ ಸಂಬಂಧವನ್ನು ನಾಗವಂಶೀಯರೇ ಎಂದು ಭಾವಿಸಲ್ಪಟ್ಟಿರಬೇಕೆಂದೂ ಮಾಡಿಕೊಂಡಿದ್ದು, ಇವರೂ ನಾಗವಂಶೀಯರೇ ಹೆಡೆಗಳ ನಾಗನ ವಿಗ್ರಹವಿರುವಂತೆಯೇ ಕಾಣುತ್ತದೆ. ಇವರ ಶಾಸನಗಳಲ್ಲಿ ಐದು ಹೆಡೆಗಳ ಬನವಾಸಿಯ 'ಹಾರೀತಿ ಪುತ್ರ ವಿಷ್ಣುಕಡ ಚುಟುಕುಲನಂದ ಸಾತಕಣ್ಣಿ' ಎಂಬ ಅರಸನ ಶಿಲಾಲೇಖದಲ್ಲಿಯೂ ಇರುವುದರಿಂದ ಈ ಆಲುವರು 'ಸಾತವಾಹನ' ವಂಶದವರೇ ನಾನು ಊಹಿಸಿರುವ ಚುಟುಕುಲದವರು. ಶಾಖೆಯವರೂ ಆಗಿರಬೇಕು.”
ಚುಟುಕುಲದಿಂದ ಮೊಳೆತ ಒಂದು “ನಾಗ ತುಳುವರ ಕುಲದೈವ, ಆದುದರಿಂದ ತುಳುವರ ಕೃಷಿ ಸಲಕರಣೆಗಳಲ್ಲಿ ನಾಗರ ಹಾವಿನ ಹೆಡೆಯ ಚಿತ್ರಣವಿರಬೇಕು ಎಂಬ ನಂಬಿಕೆ ಇದೆ. ಅವರ ತುಪ್ಯ (ಕಣಜ)ದಿಂದ ಹಿಡಿದು, ಎಲ್ಲೆಡೆಯೂ ಹಾವಿನ ಹೆಡೆಯ ಚಿತ್ರ ಇರುತ್ತಿತ್ತು. ಇವರ ಸಾಂಪ್ರದಾಯಿಕ ಆಭರಣ ಗಳಲ್ಲಿ ಹಾವಿನ ಹೆಡೆಯ ಚಿತ್ರಣ ಇರುತ್ತಿತ್ತು, ಎಂದು ಶೀನಪ್ಪ ಹೆಗ್ಗಡೆ ಬರೆಯುತ್ತಾರೆ. ಆದರೂ ಈ ಹಿನ್ನೆಲೆಯಿಂದ ಅವರ ವಂಶದ ಬಗ್ಗೆ ನಿರ್ಣಯಕ್ಕೆ ಬರುವುದು ತಪ್ಪಾಗುತ್ತದೆ. ಹಾಗಿದ್ದಲ್ಲಿ ಆಲುಪರ ಮುದ್ರೆಗಳಲ್ಲಿ ಮತ್ತು ನಾಣ್ಯಗಳಲ್ಲಿ ಮೀನಿನ ಚಿತ್ರವೂ ಇರುವುದರಿಂದ ಆಲುಪರು ಮೀನಿನ ವಂಶದವರೆಂದು ಕೂಡಾ ಭಾವಿಸಬೇಕಾಗುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ವಂಶದವರು ಆಲುಪ ಸಿಂಹಾಸನದ ಅರಸರಾಗಿದ್ದರು.” ಮೂಲತಾನ ಆದಿ ಆಲಡೆಯ ಬೆರ್ಮರು ಪ್ರಧಾನ ದೈವ, ಉಳಿದವು ಬೆರ್ಮೆರೆ ಪರಿವಾರ ದೈವಗಳು. ಪರಿವಾರ ದೈವಗಳೂ ಪ್ರಭಾವಿ ದೈವಗಳು. ತುಳು ಪಾಡ್ಡನಗಳು ಬೆರ್ಮೆರ ಮಹಿಮೆಯನ್ನು ಸಾರುತ್ತವೆ. 'ಕುಲ ಬೆರ್ಮ' ಸದಾ ಜಾಗೃತನಾಗಿ ತನ್ನ ಸಂತಾನದವರನ್ನು ಗಮನಿಸುತ್ತಾ ಇರುತ್ತಾನೆ ಎಂಬುದಕ್ಕೆ ಸಿರಿ ಪಾಡ್ಡನ ಒಂದು ಉತ್ತಮ ಉದಾಹರಣೆ: ಸಂತಾನದೇವತೆಯಾಗಿ, ರಕ್ಷಕದೇವತೆಯಾಗಿ, ಮೃತ್ಯುದೇವತೆಯಾಗಿ ಬಿರ್ಮರ್ ಪಾಡ್ಡನಗಳಲ್ಲಿ ಚಿತ್ರಿತನಾಗಿದ್ದಾನೆ.
ಸಿರಿ ಪಾಡ್ಡನದಲ್ಲಿ ಅಜ್ಜ ಬಿರ್ಮಾಳುವ 'ಲಂಕೆ ಲೋಕನಾಡಿಗೆ, ಕೋಟಿ ಚೆನ್ನಯ ಪಾಡ್ಡನದಲ್ಲಿ ಕೋಟಿ ಚೆನ್ನಯರು ಕೆಮ್ಮಲೆಗೆ', ಕಾಂತಾಬಾರೆ ಬೂದಾಬಾರೆ ಪಾಡ್ಡನದಲ್ಲಿ ಕಾಂತಾಬಾರೆ ಬೂದಾಬಾರೆಯರು 'ಕರಿಯ ಬಿತ್ತ್ ಬೆರ್ಮೆರಿಗೆ' ಹೀಗೆ ಕುಲಬೆರ್ಮೆರಿಗೆ ಹರಕೆ ಹಾಕಲು ಹೋಗುವ ಸನ್ನಿವೇಶ ಇದೆ. ಎಲ್ಲಾ ಸಂದರ್ಭಗಳಲ್ಲಿ ಅರ್ಚಕ ಬ್ರಾಹ್ಮಣ ಬಾಗಿಲು ಹಾಕಿ ಮನೆಗೆ ಹೋಗುವ ಸಂದರ್ಭ ಸಮಾನವಾಗಿ ಬರುತ್ತದೆ. ಈ ಸಂದರ್ಭಗಳಲ್ಲಿ ಮೇಲಿನ ಭಕ್ತರು 'ಕುಲಬೆರ್ಮರ' ಮೇಲಿನ ನಂಬಿಕೆಯನ್ನು ಪಣಕ್ಕಿರಿಸಿ ಗುಂಡದ ಬಾಗಿಲು ತೆರೆದುಕೊಳ್ಳುವಂತೆ ಬಿರ್ಮೆರ್' ಒಲಿದು ಬರುವಂತೆ ಮಾಡುತ್ತಾರೆ. ಹೀಗೆ ಈಗಲೂ ತುಳು ಜನಪದರ 'ಕುಲಬೆರ್ಮೆರ್' ತುಳು ಜನಪದರ ದೇವರಾಗಿ ಇದ್ದಾರೆ. ಇತ್ತೀಚಿನ ದಶಕಗಳಲ್ಲಿ (ಕರಾವಳಿ ಕಡೆ) ಬ್ರಹ್ಮಮಂಡಲದಲ್ಲೂ ಬೆರ್ಮರ ನಿಜಸ್ವರೂಪ ಜನತೆಗೆ ತಿಳಿಯುವುದಿಲ್ಲ. ಸಂಸ್ಕೃತೀಕರಣಗೊಂಡ ಬ್ರಹ್ಮನಿಗಿಂತ ಜನಪದ ಧರ್ಮದಲ್ಲಿ ಉಳಿದ ಬೆರ್ಮೆರ್ ಮತ್ತು ಇತರ ದೈವಗಳೇ ಜನರಿಗೆ ಹೆಚ್ಚು ಹತ್ತಿರವಾಗುತ್ತವೆ. ಮಾತನಾಡುವ (ಮಾಧ್ಯಮನ ಮೂಲಕ) ಈ ದೈವಗಳು ಆಶ್ವಾಸನೆ ನೀಡಿದಾಗ ಮಾನಸಿಕವಾಗಿ ನೊಂದ ಭಕ್ತರು ನಿರಾಳರಾಗುತ್ತಾರೆ. ಎ. ವಿ. ನಾವಡರು ಸಂಗ್ರಹಿಸಿದ ವೈದ್ಯರ ಸ್ತುತಿ ಹಾಡಿನಲ್ಲಿ “ಕುಲಬ್ರಹ್ಮ” ಪದ ಹಾಡಿನುದ್ದಕ್ಕೂ ಪ್ರಯೋಗವಾಗಿದೆ. ಆಶ್ಚರ್ಯವೆಂದರೆ ಈ ಹಾಡುಗಳಲ್ಲಿ ಕಾಶ್ಮೀರದ ಪ್ರಸ್ತಾಪ ಇರುವುದು. 'ಶಾಸ್ತಾರದ ಕುಲ ಬ್ರಹ್ಮಸ್ವಾಮಿಯವರು ನೆನೆವ ಕಾರ್ಯವನ್ನೆಲ್ಲ ಲೇಸು ಮಾಡುವರೋ' ಎಂದು ದರ್ಶನ ಬರಿಸುವ ಹಾಡಿನಿಂದ ಕುಲಬ್ರಹ್ಮರ ಸ್ತುತಿ ಪ್ರಾರಂಭವಾಗುತ್ತದೆ.
ಮುಂದುವರೆಯುತ್ತದೆ......
ಬರಹ : ಇಂದಿರಾ ಹೆಗ್ಗಡೆ