08/05/2026
ತಲಸ್ಸೆಮಿಯಾ ದಿನ: ಅರಿವು, ಆರೈಕೆ ಮತ್ತು ಆಶಾಕಿರಣ
ಪ್ರತಿ ವರ್ಷ ಮೇ 8ರಂದು ವಿಶ್ವ ತಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ಅಪರೂಪದ ರಕ್ತ ವ್ಯಾಧಿಯಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಕಡೆಗೆ ಸಮಾಜದ ಗಮನ ಸೆಳೆಯುವುದೇ ಈ ದಿನದ ಮೂಲ ಉದ್ದೇಶ. ತಲಸ್ಸೆಮಿಯಾ ಎಂಬುದು ಒಂದು ಆನುವಂಶಿಕ ರಕ್ತ ವ್ಯಾಧಿ. ದೋಷಪೂರಿತ ಹಿಮೋಗ್ಲೋಬಿನ್ ಸಂಶ್ಲೇಷಣೆಯಿಂದ ಉದ್ಭವಿಸುವ ಈ ರೋಗದಲ್ಲಿ ರಕ್ತದ ಕೆಂಪು ರಕ್ತ ಕಣಗಳ ಉತ್ಪಾದನೆ ತೀವ್ರವಾಗಿ ಕಡಿಮೆಯಾಗುತ್ತದೆ. ಇದನ್ನು ಮುಖ್ಯವಾಗಿ ಆಲ್ಫಾ ತಲಸ್ಸೆಮಿಯಾ ಮತ್ತು ಬೀಟಾ ತಲಸ್ಸೆಮಿಯಾ ವಿಂಗಡಿಸಬಹುದು.
ತೀವ್ರ ಸ್ವರೂಪದ ರೋಗಿಗಳಿಗೆ ಜೀವನಪರ್ಯಂತ ಪ್ರತಿ 15 ರಿಂದ 20 ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಅನಿವಾರ್ಯ. ರಕ್ತ ವರ್ಗಾವಣೆ ಅವಲಂಬಿತ ರೋಗಿಗಳ ಪೈಕಿ 23.8% ಮಂದಿ ಕಬ್ಬಿಣ ಸಂಚಯ (Iron Accumulation ಅಥವಾ Iron Overload) ಮತ್ತು ಕಿಲೇಷನ್ ಚಿಕಿತ್ಸೆಯ (Chelation Therapy) ಕೊರತೆಯಿಂದ ಸೋಂಕಿಗೆ ತುತ್ತಾಗುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ‘ಅಸ್ಥಿಮಜ್ಜೆ’ಯ ಕಸಿ (Bone Marrow Transplant) ಮಾತ್ರ ಈ ರೋಗಕ್ಕೆ ಪೂರ್ಣ ಪರಿಹಾರ ನೀಡಬಲ್ಲದು.
ಭಾರತದಲ್ಲಿ ತಲಸ್ಸೆಮಿಯಾ ವಾಹಕರ ಪ್ರಮಾಣ 1% ರಿಂದ 3% ಇದ್ದು, ಪ್ರತಿ ವರ್ಷ ಸುಮಾರು 10,000 ತಲಸ್ಸೆಮಿಯಾ ಪೀಡಿತ ಮಕ್ಕಳು ಜನಿಸುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಯ ಸಂಶೋಧಕರ ಅಧ್ಯಯನವು (ಕುಲಕರ್ಣಿ ಮತ್ತು ಇತರರು, 2011) ಒಂದು ಕಳವಳಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಕರ್ನಾಟಕ ಭಾರತದಲ್ಲೇ ಅತ್ಯಧಿಕ ಬೀಟಾ-ತಲಸ್ಸೆಮಿಯಾ ರೂಪಾಂತರಗಳನ್ನು ಹೊಂದಿರುವ ರಾಜ್ಯವಾಗಿದೆ! ಪ್ರಸ್ತುತ, ರಾಜ್ಯದಲ್ಲಿ 15,000ಕ್ಕೂ ಹೆಚ್ಚು ಜನರು ತಲಸ್ಸೆಮಿಯಾದಿಂದ ಬಳಲುತ್ತಿದ್ದು, ಇವರಲ್ಲಿ ಹೆಚ್ಚಿನ ಮಂದಿ ಸೂಕ್ತ ಆರೈಕೆಯಿಲ್ಲದೇ ನರಳುತ್ತಿದ್ದಾರೆ.
ರಾಷ್ಟ್ರೋತ್ಥಾನ ಸಂರಕ್ಷಾ: ಒಂದು ಆಶಾಕಿರಣ
ಕಳೆದ 60 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ರಾಷ್ಟ್ರೋತ್ಥಾನ ಪರಿಷತ್, ಆಗಸ್ಟ್ 19, 2013ರಂದು ಕೇವಲ 19 ಮಕ್ಕಳ ಚಿಕಿತ್ಸೆಯೊಂದಿಗೆ ಸಂರಕ್ಷಾ ಯೋಜನೆಯನ್ನು ಆರಂಭಿಸಿತು. ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ರಕ್ತಕೇಂದ್ರದ 3ನೇ ಮಹಡಿಯಲ್ಲಿ ನೆಲೆಗೊಂಡಿರುವ ಈ ಕೇಂದ್ರ ಇಂದು 7 ರಾಜ್ಯದ 29 ಜಿಲ್ಲೆಗಳ 400ಕ್ಕೂ ಹೆಚ್ಚು ಮಕ್ಕಳಿಗೆ ಸಂಪೂರ್ಣ ಉಚಿತ ಆರೈಕೆ ನೀಡುತ್ತಿದೆ.
ಈ ತಲಸ್ಸೆಮಿಯಾ ದಿನದಂದು ಒಂದು ಜವಾಬ್ದಾರಿಯುತ ಹಾಗೂ ಮಾನವೀಯ ವ್ಯಕ್ತಿಯು ಮಾಡಬೇಕಾದ ಕೆಲಸವೆಂದರೆ, ನಿಯಮಿತ ರಕ್ತದಾನ, ವಿವಾಹ ಪೂರ್ವ ತಲಸ್ಸೆಮಿಯಾ ತಪಾಸಣೆ, ಮತ್ತು ಸಂರಕ್ಷಾದಂತಹ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಮೂಲಭೂತ ಸೌಕರ್ಯಗಳ ಸಹಯೋಗ.
ಒಂದು ಮಗುವಿಗೆ ರಕ್ತ ವರ್ಗಾವಣೆಯನ್ನು ಪ್ರಾಯೋಜಿಸುವ (sponsor) ಮೂಲಕ, ಕಿಲೇಶನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ, ಅಥವಾ ತಲಸ್ಸೆಮಿಯಾ ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ನಾವು ಈ ಮಕ್ಕಳ ಬದುಕಿಗೆ ಬೆಳಕು ತೋರಬಹುದು.
ಸಂರಕ್ಷಾ - ತಲಸ್ಸೆಮಿಯಾ ಡೇ ಕೇರ್ ಸೆಂಟರ್
#07, ರಾಷ್ಟ್ರೋತ್ಥಾನ ರಕ್ತ ಕೇಂದ್ರ, 3ನೇ ಮಹಡಿ, ಗವಿಪುರ ಗುಟ್ಟಹಳ್ಳಿ, ಕೆಂಪೇಗೌಡನಗರ, ಬೆಂಗಳೂರು – 560 004
Ph: 94483 96110
Email: [email protected]
Learn More: http://samraksha.rashtrotthana.org/