05/06/2026
ಆತ್ಮೀಯ ಸಮಾಜ ಬಾಂಧವರೇ, 🙏
ಬ್ರಹ್ಮಶ್ರೀ ನಾರಾಯಣ ಗುರುಗಳ “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು” ಎಂಬ ಮಹಾನ್ ತತ್ವದ ಮಾರ್ಗದರ್ಶನದಲ್ಲಿ ಸಮಾಜದ ಐಕ್ಯತೆ ಹಾಗೂ ಸಮಗ್ರ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯ ಮಟ್ಟದ ಇನ್ನುಳಿದ ಸಂಘಗಳ ಪೂರ್ವಭಾವಿ ಸಭೆಯನ್ನು ದಿನಾಂಕ 04-06-2026ರಂದು ಸಂಜೆ 4:00 ಗಂಟೆಗೆ ನಗರದ ‘ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್’ ಹೋಟೆಲ್ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಸಮುದಾಯದ ಒಗ್ಗಟ್ಟನ್ನು ಬಲಪಡಿಸುವುದು, ಭವಿಷ್ಯದ ಕಾರ್ಯತಂತ್ರದ ಸಂಘಟನಾತ್ಮಕ ಚೌಕಟ್ಟು ಹಾಗೂ ಸರ್ವತೋಮುಖ ವಿಕಾಸದ ಯೋಜನೆಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಮಂಥನ ನಡೆಸಲಾಯಿತು.
ಎಲ್ಲ ಸಂಘ-ಸಂಸ್ಥೆಗಳು ಒಮ್ಮತದಿಂದ ಏಕತೆಯ ಹಾದಿಯಲ್ಲಿ ಮುನ್ನಡೆಯುವ ದೃಢ ಸಂಕಲ್ಪ ವ್ಯಕ್ತಪಡಿಸಿದವಲ್ಲದೆ, ಮುಂದಿನ ದಿನಗಳಲ್ಲಿ ಶಕ್ತಿಯುತವಾದ ಹೊಸ ಮಹಾ-ಒಕ್ಕೂಟವನ್ನು ಅಸ್ತಿತ್ವಕ್ಕೆ ತರುವ ಅನಿವಾರ್ಯತೆಯ ಕುರಿತು ಪ್ರಮುಖ ಚಿಂತನೆಗಳನ್ನು ಹಂಚಿಕೊಳ್ಳಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ ಹಾಗೂ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಒಮ್ಮತದ ಅಭಿಪ್ರಾಯಗಳನ್ನು ಸೂಚಿಸಿದರು.
ಸಭೆಯಲ್ಲಿ ಶ್ರೀ ಜೆ.ಪಿ.ಎನ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜೆ.ಪಿ. ಸುಧಾಕರ್, ಕಾರ್ಕಳದ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ಎಂಎಲ್ಸಿ ಶ್ರೀ ಜಗದೇವ್ ಗುತ್ತೇದಾರ್ ಸೇರಿದಂತೆ ಸಮಾಜದ ಹಿರಿಯ ಗಣ್ಯರು ಭಾಗವಹಿಸಿದ್ದರು.