04/08/2026
ಬೆಂಗಳೂರಿನ ಸ್ಥಳನಾಮಗಳ ಅತ್ಯಂತ ಪ್ರಾಚೀನ ಉಲ್ಲೇಖಗಳು: ಭಾಗ 22 - ಗೊಂಗಡಿಪುರ
ಗೊಂಗಡಿಪುರ ಬೆಂಗಳೂರಿನ ಐತಿಹಾಸಿಕ ಮಹತ್ವ ಪಡೆದ ಪ್ರದೇಶಗಳಲ್ಲಿ ಒಂದು. ಈ ಸ್ಥಳದ ಅತ್ಯಂತ ಪ್ರಾಚೀನ ಉಲ್ಲೇಖ ಸಾ.ಶ.1495ರ ಶಾಸನದಲ್ಲಿದ್ದು, ಇದರಲ್ಲಿ ಗೊಂಗಡಿಪುರವನ್ನು 'ಗೊಂಗಡಿಹಳ್ಳಿ' ಎಂದು ದಾಖಲಿಸಲಾಗಿದೆ. ಈ ಶಾಸನವು, ಅನಂತಯದೇವ ಮಹಾ ಅರಸುಗಳು ಕೆಲ್ಲಿಮಂಗಲದ ತಿಮ್ಮರಸರ ಮಕ್ಕಳಾದ ತಿಪ್ಪರಸರು, ಲಕ್ಕರಸರಿಗೆ ಹಾಗೂ ತಿಪ್ಪರಸರ ಮಕ್ಕಳಾದ ಹಿರಿಯ ತಿಮ್ಮಣ್ಣ ಮತ್ತು ಚಿಕ್ಕ ತಿಮ್ಮಣ್ಣಗಳಿಗೆ ಹಾಗೂ ದೇವರಪ್ಪರ ಮಗನಾದ ತಿಮ್ಮಣ್ಣ ಇವರಿಗೆ, ಕುಕ್ಕಲನಾಡಿಗೆ ಸಲುವ ಗೊಂಗಡಿಹಳ್ಳಿ ಗ್ರಾಮ ಹಾಗೂ ಇದರ ಚತುಸ್ಸೀಮೆಯನ್ನು ಸೂರ್ಯಗ್ರಹಣದ ಪುಣ್ಯ ಕಾಲದಲ್ಲಿ ದಾನ ನೀಡಿರುವ ವಿಷಯವನ್ನು ತಿಳಿಸುತ್ತದೆ.
ದಾನವನ್ನು ನೀಡುವ ಸಂದರ್ಭದಲ್ಲಿ ಗೊಂಗಡಿಹಳ್ಳಿ ಗ್ರಾಮವನ್ನು ಅಗ್ರಹಾರವನ್ನಾಗಿ ಮಾಡಿ, ತಿಮ್ಮಣ್ಣರಾಜಪುರ ಎಂಬ ಪ್ರತಿನಾಮವನ್ನು ನೀಡಿದ್ದು, ದಾನವನ್ನು ರಾಮನಾಥಪುರದ (ಹಾಸನ ಜಿಲ್ಲೆ) ಕಾವೇರಿ ತೀರದಲ್ಲಿ ನೀಡಲಾಗಿದೆ. ಅಲ್ಲದೇ ದಾನ ನೀಡಿದ ಪುಣ್ಯವು ಇಮ್ಮಡಿ ನರಸಿಂಗರಾಯರಿಗೆ (ವಿಜಯನಗರ ಸಾಮ್ರಾಜ್ಯದ ಅರಸ) ಲಭಿಸಬೇಕು ಎಂಬ ಮಾಹಿತಿಯು ಈ ಶಾಸನದಲ್ಲಿದೆ.
ಈ ಶಾಸನವು ಪ್ರಮುಖವಾಗಿ ಎರಡು ದಿನಾಂಕಗಳನ್ನು ಉಲ್ಲೇಖಿಸುತ್ತದೆ. ಇವುಗಳಲ್ಲಿ, 25-ಫೆಬ್ರವರಿ-1495ರ, ಮಂಗಳವಾರ ದಾನ ನೀಡಿದ ದಿನವಾದರೆ (ಸೂರ್ಯಗ್ರಹಣ ನಡೆದ ದಿನ), 17-ಡಿಸೆಂಬರ್-1495ರ, ಗುರುವಾರ ಶಾಸನ ಕಲ್ಲನ್ನು ಅಧಿಕೃತವಾಗಿ ನೆಟ್ಟ ದಿನವಾಗಿದೆ.
ಗೊಂಗಡಿಪುರವು ಈ ಶಾಸನವನ್ನು ಹಾಕಿಸಿದಾಗ 'ಕುಕ್ಕಲನಾಡು' ಎಂಬ ಪ್ರಾಚೀನ ಆಡಳಿತ ವಿಭಾಗಕ್ಕೆ ಸೇರಿದ್ದು, ಈ ನಾಡು ಬೆಂಗಳೂರಿನ ವಾಯುವ್ಯ ಹಾಗೂ ಪಶ್ಚಿಮಕ್ಕೆ ಅರ್ಕಾವತಿ ನದಿಯ ಎರಡೂ ದಂಡೆಗಳ ಉದ್ದಕ್ಕೂ ಹರಡಿತ್ತು. ಬೆಂಗಳೂರು ಉತ್ತರ ತಾಲ್ಲೂಕಿನ ಪಶ್ಚಿಮ ಭಾಗ, ಮಾಗಡಿ ಹಾಗೂ ನೆಲಮಂಗಲ ತಾಲ್ಲೂಕಿನ ಪೂರ್ವ ಭಾಗ, ರಾಮನಗರ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರ ದಿಕ್ಕಿನ ಕೆಲವು ಭೂ ಭಾಗಗಳು ಅಂದರೆ, ಹೆಸರಘಟ್ಟ, ಐಗಂಡಪುರ, ಬಿನ್ನಮಂಗಲ, ಮಾಕಳಿ, ಚಿಕ್ಕಬಾಣವಾರ, ಯಶವಂತಪುರ, ದಾಸರಹಳ್ಳಿ, ಪೀಣ್ಯ, ಕ್ಯಾತಮಾರನಹಳ್ಳಿ, ನಾಗರಬಾವಿ, ತಾವರೆಕೆರೆ, ಕೆಂಗೇರಿ, ಬಿಡದಿ, ಕುಂಬಳಗೋಡು, ಬೆಂಗಳೂರು ವಿಶ್ವವಿದ್ಯಾನಿಲಯ (ಜ್ಞಾನ ಭಾರತಿ) ಇನ್ನೂ ಮುಂತಾದ ಪ್ರದೇಶಗಳು ಈ ಕುಕ್ಕಲನಾಡಿನ ವ್ಯಾಪ್ತಿಗೆ ಒಳಪಟ್ಟಿದ್ದವು.
ಈ ಶಾಸನದಲ್ಲಿ ದಾನವನ್ನು ರಕ್ಷಿಸಿದವರಿಗೆ ಹಾಗೂ ಹಾಳು ಮಾಡಿದವರಿಗೆ ಸಿಗುವ ಪ್ರತಿಫಲಗಳನ್ನು ಸಹ ತಿಳಿಸಲಾಗಿದೆ. ತಾವು ದಾನ ನೀಡಿದಾಗ ಲಭಿಸುವ ಪುಣ್ಯಕ್ಕಿಂತ ಎರಡುಪಟ್ಟು ಪುಣ್ಯವು, ಈ ದಾನವನ್ನು ರಕ್ಷಿಸಿದವರಿಗೆ ಲಭಿಸುತ್ತದೆ ಎಂಬ ಮಾಹಿತಿಯನ್ನು ಸಂಸ್ಕೃತ ಭಾಷೆಯಲ್ಲಿ ನೀಡಿದ್ದರೆ, ಈ ದಾನವನ್ನು ಅಪಹರಿಸಿದವರು / ಹಾಳು ಮಾಡಿದವರು ಗಂಗಾ ನದಿ ತೀರದಲ್ಲಿ ಗೋವನ್ನು ಕೊಂದ ಪಾಪಕ್ಕೆ ಹೋಗುವರು ಎಂಬ ಶಾಪಾಶಯವನ್ನು ಕನ್ನಡದಲ್ಲಿ ನೀಡಲಾಗಿದೆ.
ಈ ಪೋಸ್ಟ್ನೊಂದಿಗೆ ಗೊಂಗಡಿಪುರ ಶಾಸನದ 3ಡಿ ಡಿಜಿಟಲ್ ಚಿತ್ರಗಳನ್ನು ಹಂಚಿಕೊಂಡಿದ್ದು, ಇವುಗಳಲ್ಲಿ 'ಗೊಂಗಡಿಹಳ್ಳಿ' ಎಂಬ ಹೆಸರು ಕೆತ್ತಿರುವುದನ್ನು ನೀವು ಸ್ಪಷ್ಟವಾಗಿ ಗುರುತಿಸಬಹುದು. ಈ ಶಾಸನ ಕಲ್ಲು 'ಗೊಂಗಡಿಪುರದ' ಇತಿಹಾಸಕ್ಕೆ ಪ್ರಮುಖ ಆಧಾರವಾಗಿರುವುದರಿಂದ, ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಇದನ್ನು 3ಡಿ ಸ್ಕ್ಯಾನಿಂಗ್ ಮೂಲಕ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ.
ಚಿತ್ರಕೃಪೆ: ದಿ ಮಿಥಿಕ್ ಸೊಸೈಟಿ – ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನಾ ತಂಡ.