17/12/2025
ಪತ್ರಿಕಾ ಪ್ರಕಟಣೆ
ಬೆಂಗಳೂರು , ಡಿಸೆಂಬರ್ 17, 2025
*ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ(AICCTU)
ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ನೊಂದಾಯಿತ ಬೀದಿ ವ್ಯಾಪಾರಿಗಳ ಕಾರ್ಮಿಕ ಸಂಘಟನೆ. ನಮ್ಮ ಸಂಘಟನೆಯ ಸದಸ್ಯರು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಹಾಗು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.
ನಾವು ಈ ಪತ್ರಿಕಾ ಗೋಷ್ಠಿ ಮಾಡುತ್ತಿರುವ ಕಾರಣವೇನೆಂದರೆ, ಬಿಬಿಎಂಪಿ ಹೋಗಿ ೫ ನೂತನ ನಗರಪಾಲಿಕೆಗಳು ಆದಮೇಲೂ ಸಹ ಬೀದಿ ವ್ಯಾಪಾರಿಗಳು ಎದುರಿಸುತ್ತಿರುವ ಕಿರುಕುಳ ನಿಲ್ಲುತ್ತಿಲ್ಲ ಹಾಗು ೫ ನಗರಪಾಲಿಕೆಗಳಲ್ಲಿ ಬೀದಿ ವ್ಯಾಪಾರಿಗಳ ಕಾಯ್ದೆ (2014) ರ ಅನುಷ್ಠಾನ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ನೀಡದಿರುವ ಬಗ್ಗೆ
ಬಿ.ಬಿ.ಎಂ.ಪಿ ವತಿಯಿಂದ ಕಳೆದ ವರ್ಷ ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಹಾಗು ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ 2014 ಯಡಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆ ನಡೆದ ಹಲವು ತಿಂಗಳುಗಳಾದರೂ ಗುರುತಿನ ಚೀಟಿ ಮುದ್ರಣ ಹಾಗು ವಿತರಣೆ ಆಗಿರುವುದಿಲ್ಲ.
ಬೀದಿ ವ್ಯಾಪಾರಿಗಳ ಕಾನೂನಿನ Scheme ಕಲಂ 5(2) ಪ್ರಕಾರ , ಸಮೀಕ್ಷೆ ಮುಗಿದ ಮೂರೂ ತಿಂಗಳುಗಳ ಒಳಗೆ ಗುರುತಿನ ಚೀಟಿ ಹಾಗು ವ್ಯಾಪಾರ ಪ್ರಮಾಣ ಪಾತ್ರ ನೀಡಬೇಕಿತ್ತು. ಈಗ ಗುರುತಿನ ಚೀಟಿಗಳ ಮುದ್ರಣ ಆಗಿದ್ದು ಅದನ್ನು ಶೀಘ್ರದಲ್ಲೇ ವಿತರಣೆ ಮಾಡಬೇಕೆಂದು ನಮ್ಮ ಸಂಘಟನೆಯಿಂದ ಬೆಂಗಳೂರು ದಕ್ಷಿಣ ನಗರಪಾಲಿಕೆ, ಕೇಂದ್ರ ನಗರಪಾಲಿಕೆ, ಪಶ್ಚಿಮ ನಗರಪಾಲಿಕೆ ಹಾಗು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರನ್ನು ಭೇಟಿಯಾಗಿ ಮನವಿ ಕೊಟ್ಟರು ಸಹ ಇನ್ನು ಏನು ಕ್ರಮ ತೆಗೆದುಕೊಂಡಿಲ್ಲ. ನಮಗೆ ಹೊಸ ಗುರುತಿನ ಚೀಟಿ ಬರದೇ ಪೊಲೀಸ್ ಹಾಗು ಇತರೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.
ಬೀದಿ ವ್ಯಾಪಾರಿಗಳಿಗೆ ಮುಂದುವರಿಯುತ್ತಿರುವ ಕಿರುಕುಳ
ಬೆಂಗಳೂರಿನ ಹಲವು ಮಾರುಕಟ್ಟೆಗಳಲ್ಲಿ ಈಗಲೂ ಸಹ ಬೀದಿ ವ್ಯಾಪಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ವಿಜಯನಗರದಲ್ಲಿ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಹಲವು ಪ್ರಯತ್ನಗಳು ಮಾಡಲಾಗುತ್ತಿದೆ - ಮೊದಲು ಅಧಿಕಾರಿಗಳು ನ್ಯಾಯಾಲಯ ಮೂಲಕ ನಮ್ಮನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ನ್ಯಾಯಾಲಯ ನಮಗೆ ರಕ್ಷಣೆ ನೀಡಿತು. ನಂತರ ರಸ್ತೆ ಬದಿಯಲ್ಲಿ ಮೋರಿ ಸ್ವಚ್ಛಗೊಳಿಸುವ ನೆಪದಲ್ಲಿ ಮೂರೂ ತಿಂಗಳು ಮೋರಿ ಮೇಲೆ ಕಲ್ಲನ್ನು ಪಕ್ಕಕ್ಕಿಟ್ಟು, ಮೋರಿಯಲ್ಲಿರುವ ಮಣ್ಣನ್ನು ರಸ್ತೆ ಬದಿಯಲ್ಲೇ ಬಿಟ್ಟರು. ಮಾಧ್ಯಮಗಳಲ್ಲಿ ಇದರ ಬಗ್ಗೆ ಟಿಕೆ ಮಾಡಿದಮೇಲೆ ಮಣ್ಣನ್ನು ಎತ್ತಿದರು. ಜಯನಗರ , ಚರ್ಚ್ ಸ್ಟ್ರೀಟ್ ಮುಂತಾದ ಕಡೆ ಪೊಲೀಸ್ ಹಾಗು ನಗರಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಮೇಲೆ ಕಾನೂನು ಬಾಹಿರ ದಂಡವನ್ನು ವಿಧಿಸುತ್ತಿದ್ದಾರೆ. ಮುನಿರೆಡ್ಡಿಪಾಳ್ಯ ಮಾರುಕಟ್ಟೆಯಲ್ಲಿ ನೆನ್ನೆ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದ್ದಾರೆ.
ಪಟ್ಟಣ ವ್ಯಾಪಾರ ಸಮಿತಿಗಳ ರಚನೆ
ಬೀದಿ ವ್ಯಾಪಾರಿಗಳ ಕಾಯ್ದೆಯ ಅನುಷ್ಠಾನ ಮಾಡುವ ಅಧಿಕಾರ ನೀಡಿರುವುದು ಪಟ್ಟಣ ವ್ಯಾಪಾರ ಸಮಿತಿಗೆ. 2020 ರಲ್ಲಿ ಚುನಾವಣೆ ಮೂಲಕ, ಬಿಬಿಎಂಪಿಯ ಎಂಟು ವಲಯಗಳಲ್ಲಿ , ವಲಯವಾರು ಪಟ್ಟಣ ವ್ಯಾಪಾರ ಸಮಿತಿ ರಚಿಸಲಾಯಿತು. ಈಗ ಅದರ ಅವಧಿ ಮುಗಿದಿದೆ. ಆದರೆ ಹೊಸ ಸಮಿತಿಗಳು ರಚನೆ ಆಗಿಲ್ಲ. ಹಾಗಾಗಿ ಬೀದಿ ವ್ಯಾಪಾರಿಗಳ ಕಿರುಕುಳ ಹಾಗು ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯಾವುದೇ ವೇದಿಕೆ ಇಲ್ಲ.
ಈ ಎಲ್ಲದರ ಬಗ್ಗೆ ನಾವು ಅಧಿಕಾರಿಗಳನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಮ್ಮ ಈ ಕೆಳಗಿನ ಹಕ್ಕೊತ್ತಾಯಗಳನ್ನು ಈಡೇರಿಸದಿದ್ದಲ್ಲಿ , ನಾವು ಸ್ವಲ್ಪ ದಿವಸದಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ.
ನಮ್ಮ ಹಕ್ಕೊತ್ತಾಯಗಳು'-
1) ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ಕೂಡಲೇ ವಿತರಿಸಬೇಕು. ಅದರಲ್ಲಿ ನಮ್ಮ ವ್ಯಾಪಾರದ ಸ್ಥಳ ಸ್ಪಷ್ಟವಾಗಿ ನಮೂದಿಸಬೇಕು. ಗುರುತಿನ ಚೀಟಿ ಕೊಡುವುದು ವಿಳಂಬವಾಗಿದೆ, ಹಾಗಾಗಿ ಅದರಲ್ಲಿರುವ ಸಿಂಧುತ್ವ ಸಹ ವಿಸ್ತರಿಸಬೇಕು.ಹಾಗೆ ಈ ವಿತರಣೆಯನ್ನು ನಗರಪಾಲಿಕೆಯ ಕಚೇರಿಯಲ್ಲೇ , ನಗರಪಾಲಿಕೆಯ ಅಧಿಕಾರಿಗಳ ಮೂಲಕವೇ ಮಾಡಬೇಕೆಂದು ಕೋರುತ್ತೇವೆ. ಕಳೆದ ಬಾರಿ ( 2018 ನಲ್ಲಿ) ಬಿಬಿಎಂಪಿ ಸದಸ್ಯರು / ಶಾಸಕರ ಮೂಲಕ ವಿತರಣೆ ಮಾಡಿದಾಗ ಹಲವು ವ್ಯಾಪಾರಿಗಳ ಗುರುತಿನ ಚೀಟಿ ಕಳೆದುಹೋದವು ಹಾಗು ಬಹಳಷ್ಟು ಗೊಂದಲವಾಯಿತು. ಹಾಗಾಗಿ ಈ ಕೂಡಲೇ ಗುರುತಿನ ಚೀಟಿಯ ವಿತರಣೆ ನಗರಪಾಲಿಕೆಯ ಕಚೇರಿಯ , ಅಧಿಕಾರಿಗಳ ಮೂಲಕವೇ ಆಗಲಿ. ಇದಕ್ಕೆ ಕಳೆದ ಪಟ್ಟಣ ವ್ಯಾಪಾರಿ ಸಮಿತಿಯ ಸದಸ್ಯರುಗಳ ಸಹಾಯ ಸಹ ಪಡೆಯಬಹುದು.
2)ಕೂಡಲೇ ಪ್ರತಿ ನಗರಪಾಲಿಕೆಯಲ್ಲಿ ವಲಯಕ್ಕೊಂದು ಪಟ್ಟಣ ವ್ಯಾಪಾರ ಸಮಿತಿ ರಚನೆಯಾಗಬೇಕು
3)ಹೊಸ ವಲಯಗಳ ಅಧಿಕಾರಿಗಳಿಗೆ ಬೀದಿ ವ್ಯಾಪಾರಿಗಳ ಕಾನೂನಿನ ಬಗ್ಗೆ ಕಾರ್ಯಾಗಾರ ನಡೆಸಬೇಕು
4)ಮುಂಬರುವ ರಾಜ್ಯ ಬಡ್ಜೆಟ್ ನಲ್ಲಿ ಬೀದಿ ವ್ಯಾಪಾರಿಗಳ ಮಾರುಕಟ್ಟೆಗಳಲ್ಲಿ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆಗೆ ಶೆಲ್ಟರ್ ಕಟ್ಟಿಕೊಡಲು ಅನುದಾನ ನೀಡಬೇಕು
5)ಮಹಿಳಾ ಬೀದಿ ವ್ಯಾಪಾರಿಗಳಿಗೆ ಶೌಚಾಲಯದ ಉಪಯೋಗ ಉಚಿತ ಮಾಡಿಕೊಡಬೇಕು
6)ವಿಜಯನಗರ, ಮುನಿರೆಡ್ಡಿಪಾಲ್ಯ, ಚರ್ಚ್ ಸ್ಟ್ರೀಟ್, ಜಯನಗರ ೪ ನೇ ಬ್ಲಾಕ್ ಮುಂತಾದ ಬೀದಿ ವ್ಯಾಪಾರಿಗಳಿಗೆ ನಡೆಯುತ್ತಿರುವ ಕಿರುಕುಳ ನಿಲ್ಲಿಸಬೇಕು
7)ಬೀದಿ ವ್ಯಾಪಾರಿಗಳ ಕಾನೂನಿನ ಕಲಂ 20 ರಾಕ್ ಅಡಿ ಕೂಡಲೇ ಕುಂದುಕೊರತೆ ನಿವಾರಣಾ ಸಮಿತಿ ರಚಿಸಬೇಕು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - 9880595032, 7019896804